ಬಂಟ್ವಾಳ: ಶ್ರೀ ಕ್ಷೇ.ಧ.ಗ್ರಾ. ಯೋ. ಬಿ.ಸಿ ಟ್ರಸ್ಟ್ ಬಂಟ್ವಾಳ, ಪಾಣೆಮಂಗಳೂರು ವಲಯ ಮತ್ತು ಮಹಿಳಾ ಜ್ಞಾನ ವಿಕಾಸ ಇವುಗಳ ಆಶ್ರಯದಲ್ಲಿ *ಕೊರೋನ ವೈರಸ್ ಮತ್ತು ಡ್ರಗ್ಸ್ ಹಾವಳಿ*ಕುರಿತು ನಾಗರಿಕರಲ್ಲಿ ಅರಿವು, ಜಾಗೃತಿ ಮೂಡಿಸುವ ಸಲುವಾಗಿ ದಾವಣಗೆರೆಯ ತಂಡ ದಿಂದ ಸಜೀಪಮೂಡ ಹಿ.ಪ್ರಾ.ಶಾಲೆಯ ವಠಾರದಲ್ಲಿ ಬೀದಿ ನಾಟಕ ಪ್ರದರ್ಶನ ನಡೆಯಿತು.
ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಎ ಸಿ ಭಂಡಾರಿ ಅವರು ಚಾಲನೆ ನೀಡಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಹೆಗ್ಗಡೆ ಅವರ ಗ್ರಾಮಾಭಿವೃದ್ಧಿ, ಮಹಿಳಾ ಸಬಲೀಕರಣ ಇತ್ಯಾದಿ ಚಿಂತನೆಗಳ ಮೂಲಕ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳ ಜೊತೆಗೆ ಸಕಾಲಿಕ ಸಮಸ್ಯೆಗಳಾದ ಕೊರೋನ ವಿಪತ್ತು ಮತ್ತು ಮಾದಕ ವ್ಯಸನ ಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬೀದಿನಾಟಕ ಗಳಂತಹ ಕಾರ್ಯಕ್ರಮಗಳನ್ನು ಯೋಜನೆಯ ಮೂಲಕ ಹಮ್ಮಿ ಕೊಂಡಿರುವುದು ಅವರ ಸಾಮಾಜಿಕ ಕಳಕಳಿಯ ಪ್ರತೀಕ ಎಂದರು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಜೀಪ ಮೂಡ ಗ್ರಾ.ಪ. ನಿಕಟಪೂರ್ವ ಅಧ್ಯಕ್ಷರಾದ ವಿಶ್ವನಾಥ ಬೆಲ್ಚಡ ವಹಿಸಿದ್ದರು. ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ. ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಾಮಾಜಿಕ ಪಿಡುಗು ಗಳ ಬಗ್ಗೆ ಓದು, ಬರಹ ಮಾದ್ಯಮಗಳ ಮೂಲಕ ಅರಿವು ಮೂಡಿಸುವುದರ ಬದಲು ಬೀದಿನಾಟಕ ದಂತಹ ಕಾರ್ಯಕ್ರಮಗಳ ಮೂಲಕ ತೆರೆದಿಡುವುದು ಹೆಚ್ಚಿನ ಪರಿಣಾಮ ಬೀರುತ್ತದೆ ಎಂದರು.
ಹೆಡ್ ಕಾನ್ಸ್ಟೇಬಲ್ ಹೆಚ್. ಸಿ ನಾಗರಾಜ್ ಮಂಗಳೂರು, ಬಂಟ್ವಾಳ ವಲಯ ಅಧ್ಯಕ್ಷ ವಸಂತ, ಸಜೀಪ ಮೂಡ ಒಕ್ಕೂಟ ಅಧ್ಯಕ್ಷ ಚಂದ್ರಹಾಸ್ ಉಪಸ್ಥಿತರಿದ್ದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಪ್ನಾ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಅಮಿತಾ ಅವರು ನಿರೂಪಿಸಿ ವಂದಿಸಿದರು.
