ಬಂಟ್ವಾಳ: ಕೊರೋನಾ ಲಾಕ್ ಡೌನ್ ಸಂದರ್ಭ ಕೊರೋನಾ ವಾರಿಯರ್ಸ್ ತಂಡವನ್ನು ಮುನ್ನಡೆಸಿ, ತಾಲೂಕಿನ ಜನತೆಗೆ ಉತ್ತಮ ಸೇವೆ ನೀಡಿದ ಮೂರು ಮಂದಿ ಮಹಿಳಾ ಅಧಿಕಾರಿಗಳಿಗೆ ಜೇಸಿಐ ಬಂಟ್ವಾಳದ ಆತಿಥ್ಯದಲ್ಲಿ ಭಾನುವಾರ ನಡೆದ ವಲಯ 15ರ ವ್ಯವಹಾರ ಸಮ್ಮೇಳನದಲ್ಲಿ ಗೌರವಾಭಿನಂದನೆಯನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಅವರನ್ನು
ಶಾಲು, ಹಾರ, ಸ್ಮರಣಿಕೆ ನೀಡಿ ಗೌರವಿಸಲಾಗಿತ್ತು. ಅನಿವಾರ್ಯ ಕಾರಣಗಳಿಂದ ಅಂದು ಅನುಪಸ್ಥಿತರಿದ್ದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರನ್ನು ಬುಧವಾರ ಮಿನಿ
ವಿಧಾನಸೌಧದ ಕಚೇರಿಯಲ್ಲಿ ಜೇಸಿಐ ಬಂಟ್ವಾಳದ ಸದಸ್ಯರು ಅಭಿನಂದಿಸಿದರು.
ಈ ಸಂದರ್ಭ ಜೇಸಿಐ ಬಂಟ್ವಾಳ ಅಧ್ಯಕ್ಷ ಸದಾನಂದ ಬಂಗೇರ, ಜೇಸಿರೆಟ್ ಅಧ್ಯಕ್ಷೆ ರೂಪಾ ಎಸ್. ಬಂಗೇರ, ವ್ಯವಹಾರ ವಿಭಾಗದ ವಲಯ ಸಂಯೋಜಕ ಲೋಕೇಶ್ ಸುವರ್ಣ, ಪೂರ್ವಾಧ್ಯಕ್ಷರಾದ ನಾಗೇಶ್ ಬಾಳೆಹಿತ್ಲು, ಸಂದೀಪ್ ಸಾಲ್ಯಾನ್, ದಯಾನಂದ ರೈ, ಜೇಸಿರೆಟ್ ಸದಸ್ಯೆ ವಿದ್ಯಾ ಉಮೇಶ್ ಮೂಲ್ಯ ಉಪಸ್ಥಿತರಿದ್ದರು. ಕೊರೋನಾ ಲಾಕ್ ಡೌನ್ ಸಂದರ್ಭ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿರುವುದು, ಜನರ ಸಮಸ್ಯೆಗಳಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸಿ ಸೇವೆ ನೀಡಿರುವುದು ಮಾತ್ರವಲ್ಲದೆ ಕೊರೋನಾ ವಾರಿಯರ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಇವರ ಕಾರ್ಯಕ್ಷಮತೆಯನ್ನು ಹಾಗೂ ಸೇವಾ ಮನೋಭಾವನೆಯನ್ನು ಗುರುತಿಸಿ ಈ ಗೌರವಾರ್ಪಣೆ ಸಲ್ಲಿಸಲಾಗಿದೆ.
