ಬಂಟ್ವಾಳ: ಎಡನೀರು ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಅವರು ಧಾರ್ಮಿಕತೆ ಜೊತೆಗೆ ಯಕ್ಷಗಾನ ಕಲಾರಾದನೆ ಮತ್ತು ಸಮಾಜ ಸುಧಾರಣೆಗೆ ಶಿಸ್ತುಬದ್ಧ ಮಾರ್ಗದರ್ಶನ ನೀಡಿದ್ದರೆ, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟಿನ ಅಧ್ಯಕ್ಷ ಯು.ಗಂಗಾಧರ ಭಟ್ ಅವರು ಕೂಡಾ ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಸಂತನಂತೆ ಸರಳ ಜೀವನ ನಡೆಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದ್ದಾರೆ. 
ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರೀ ದೇವಿ ಸಭಾಂಗಣದಲ್ಲಿ ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್, ಎಡನೀರು ಯಕ್ಷಗಾನ ಸಪ್ತಾಹ ಸಮಿತಿ, ಶಂಕರ ಸೇವಾ ಪ್ರತಿಷ್ಠಾನ, ನೀರ್ಪಾಜೆ ಭೀಮ ಭಟ್ ಅಭಿಮಾನಿ ಬಳಗ ವತಿಯಿಂದ ಬುಧವಾರ ನಡೆದ ಸಂತಾಪ ಸಭೆ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಮಾಜಿ ಸಚಿವ ಬಿ.ರಮಾನಾಥ ರೈ ನುಡಿನಮನ ಸಲ್ಲಿಸಿದರು. ನಮ್ಮನ್ನಗಲಿದ ಇವರಿಬ್ಬರ ಮಾನವತಾವಾದಿ ಬದುಕಿನ ಸಂದೇಶ ನಿರಂತರ ನಮ್ಮೊಂದಿಗೆ ಇರಲಿದೆ ಎಂದರು.
ಕಸಾಪ ಅಧ್ಯಕ್ಷ ಕೆ.ಮೋಹನ ರಾವ್, ಎಡನೀರು ಯಕ್ಷಗಾನ ಸಪ್ತಾಹ ಸಮಿತಿ ಗೌರವಾಧ್ಯಕ್ಷ ಎ.ಸಿ.ಭಂಡಾರಿ, ನೀರ್ಪಾಜೆ ಭೀಮ ಭಟ್ ಅಭಿಮಾನಿ ಬಳಗ ಅಧ್ಯಕ್ಷ ಸುದರ್ಶನ್ ಜೈನ್, ಅಳಿಕೆ ಲೋಕಸೇವಾ ಟ್ರಸ್ಟಿನ ಕಾರ್ಯದರ್ಶಿ ಅಳಿಕೆ ಚಂದ್ರಶೇಖರ ಭಟ್, ಕಸಾಪ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ಪ್ರಮುಖರಾದ ರಾಜಮಣಿ ರಾಮಕುಂಜ, ಸರಪಾಡಿ ಅಶೋಕ್ ಶೆಟ್ಟಿ, ಕೊಳಕೆ ಗಂಗಾಧರ ಭಟ್, ನಾಗವೇಣಿ ಮಂಚಿ, ಪ್ರೊ.ಕೆ.ತುಕಾರಾಮ ಪೂಜಾರಿ, ಅನಾರು ಕೃಷ್ಣ ಭಟ್, ಶಿವಶಂಕರ ಎನ್. ಅಬ್ಬಾಸ್ ಆಲಿ ಮತ್ತಿತರರು ನುಡಿನಮನ ಮತ್ತು ಪುಷ್ಪನಮನ ಸಲ್ಲಿಸಿದರು. ಶಂಕರ ಸೇವಾ ಪ್ರತಿಷ್ಠಾನ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಸ್ವಾಗತಿಸಿ, ವಂದಿಸಿದರು.
