ಬಂಟ್ವಾಳ: ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿಯಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರನ್ನು ಭೇಟಿಯಾಗಿ ಮುಳುಗಡೆ ರೈತರಿಗೆ ನ್ಯಾಯೋಚಿತ ಪರಿಹಾರ ದೊರಕದೆ ಇರುವ ಬಗ್ಗೆ ಗಮನಸೆಳೆಯಿತು. 
ಇದಕ್ಕೆ ಸ್ಪಂದಿಸಿದ ಶಾಸಕರು ಮಂಗಳೂರು ನಗರಪಾಲಿಕೆ ಆಯುಕ್ತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ರೈತರಿಗೆ ಬಾಕಿ ಇರುವ ಪರಿಹಾರವನ್ನು ಒದಗಿಸುವಂತೆ ಸೂಚಿಸಿದರು. ಹಾಗೆಯೇ ವರತೆ ಪ್ರದೇಶದ ರೈತರಿಗೂ ನ್ಯಾಯೋಚಿತ ಪರಿಹಾರಕ್ಕಾಗಿ ಕಂದಾಯ ಸಚಿವ ಆರ್ ಅಶೋಕರನ್ನು ಭೇಟಿಯಾಗಿ ಕಳೆದ ಅಧಿವೇಶನದಲ್ಲಿ ನೀಡಿದ ಭರವಸೆಯಂತೆ ರೈತರ ಹಿತಾಸಕ್ತಿ ಕಾಪಾಡುವ ಭರವಸೆಯನ್ನು ಶಾಸಕರು ನೀಡಿದ್ದಾರೆ ಎಂದು ಹೋರಾಟ ಸಮಿತಿಯ ಪ್ರಕಟಣೆ ತಿಳಿಸಿದೆ.
ನಿಯೋಗದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್,ರೈತರಾದ ಪಿ ಸುದೇಶ್ ಮಯ್ಯ, ವಾಸುದೇವರಾವ್ , ರಾಮಚಂದ್ರರಾವ್ , ಹೇಮಲತಾ, ಧನಂಜಯ ಶೆಟ್ಟಿ, ನರೇಶ್ ಹೊಳ್ಳ, ಬಿಜೆಪಿ ಮುಖಂಡ ಶ್ರೀಕಾಂತ ಶೆಟ್ಟಿ ಸಂಕೇಶ ಮತ್ತಿತರರು ಉಪಸ್ಥಿತರಿದ್ದರು.
