ಬಂಟ್ವಾಳ: ನಗರ ಸ್ಥಳೀಯಾಡಳಿತ ಸಂಸ್ಥೆಗೆ ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲದೆ ಬರೋಬ್ಬರಿ ಎರಡುವರ್ಷ ಸಂದಿದೆ. ರಾಜ್ಯದ 29 ನಗರಸಭೆ,ಬಂಟ್ವಾಳ ಪುರಸಭೆ ಸಹಿತ 53 ಪುರಸಭೆ,20ಪಟ್ಟಣಪಂಚಾಯತ್ ಗೆ 2018 ಆಗಸ್ಟ್ 31 ರಂದು ಚುನಾವಣೆ ನಡೆದಿದ್ದರೆ , 2019 ಮೇ.29 ರಂದು 7 ನಗರಸಭೆ, 30 ಪುರಸಭೆ,19 ಪಟ್ಟಣ ಪಂಚಾಯತ್ ಗೆ ಚುನಾವಣೆ ನಡೆದಿತ್ತು.
ಎರಡುವರ್ಷ :
ಬಂಟ್ವಾಳ ಪುರಸಭೆಗೆ ಪ್ರಥಮ ಹಂತದಲ್ಲಿ ಚುನಾವಣೆ ನಡೆದಿದ್ದು,ಸೆ.3 ರಂದು ಫಲಿತಾಂಶ ಪ್ರಕಟವಾಗಿತ್ತು. ಬಂಟ್ವಾಳ ಪುರಸಭೆಯ ಒಟ್ಟು ೨೭ ಸ್ಥಾನಗಳ ಪೈಕಿ ಕಾಂಗ್ರೆಸ್ ೧೨, ಬಿಜೆಪಿ ೧೧ ಹಾಗೂ ಎಸ್ಡಿಪಿಐ ೪ ಸ್ಥಾನಗಳನ್ನು ಪಡೆದಿತ್ತು. ಆದೇ ದಿನ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಕೂಡ ಪ್ರಕಟಗೊಂಡಿತ್ತು. ಆದರೆ ಆಗಿನ ಮೈತ್ರಿ ಸರಕಾರ ಪ್ರಕಟಿಸಿದ ಮೀಸಲಾತಿಗೆ ಕೆಲ ನಗರ ಸಂಸ್ಥೆಯ ಪ್ರತಿನಿಧಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದರಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದ್ದು , ಬಂಟ್ವಾಳ ಪುರಸಭೆಗೆ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗಿ ಗುರುವಾರಕ್ಕೆ(ಸೆ.3) ಪೂರ್ತಿ ಎರಡು ವರ್ಷ ಸಂದಿದೆ.
ಇದೇ ಮೊದಲಬಾರಿಗೆ ಇಷ್ಟೊಂದು ಸುದೀರ್ಘ ಅವಧಿಯ ಕಾಲ ಬಂಟ್ವಾಳ ಪುರಸಭೆ ಆಡಳಿತಾಧಿಕಾರಿಯವರ ದರ್ಬಾರಿನಲ್ಲಿ ಆಡಳಿತ ನಡೆಯುತ್ತಿರುವುದು ಹೊಸದಾಖಲೆಯಾಗಿದೆ.
ಬಂಟ್ವಾಳದಲ್ಲು ಮೀಸಲಾತಿ ಬದಲಾವಣೆ:
ಬಂಟ್ವಾಳ ಪುರಸಭೆಗೆ ಸರಕಾರ ಮೊದಲಿಗೆ ಪ್ರಕಟಿಸಿದ ಮೀಸಲಾತಿಯ ಪ್ರಕಾರ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಿಡಲಾಗಿತ್ತು, ಇದಾದ ಕೆಲ ದಿನದಲ್ಲಿ ಆಗಿನ ಮೈತ್ರಿಸರಕಾರ ಕೆಲ ನಗರಸಭೆ,ಪುರಸಭೆಯ ಮೀಸಲಾತಿಯನ್ನು ರಾಜಕೀಯ ಕಾರಣಕ್ಕಾಗಿ ಬದಲಾಯಿಸಿತ್ತು.ಈ ಸಂದರ್ಭ ಬಂಟ್ವಾಳ ಪುರಸಭೆಯ ಅಧ್ಯಕ್ಷ ಹುದ್ದೆಯನ್ನು ಮಾತ್ರ ಪ.ಜಾತಿಗೆ ಮೀಸಲಿಟ್ಟು ಆದೇಶಿಸಿತ್ತು.ಪುರಸಭೆಯ ಸದಸ್ಯರು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.ಮತ್ತೆರಡು ಬಾರಿ ಸರಕಾರ ಪ್ರಕಟಿಸಲಾದ ಮೀಸಲಾತಿಗೆ ರಾಜ್ಯದ ಇತರೆ ನಗರಸಂಸ್ಥೆ ಪ್ರತಿನಿಧಿಗಳು ಕೋಟ್೯ ಮೆಟ್ಟಿಲೆರಿದ್ದರಿಂದ ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ.
ಪ್ರಮಾಣವಚನ ಸ್ವೀಕರಿಸಿಲ್ಲ:
ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗಿ ಎರಡು ವರ್ಷ ಸಂದಿದೆ.ಸದ್ಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯದಿದ್ದರಿಂದ ಚುನಾವಣೆಯಲ್ಲಿ ಆಯಾಯ ವಾರ್ಡಿನಿಂದ ಗೆಲುವು ಸಾಧಿಸಿ ಸದಸ್ಯರಾದರೂ ಅವರು ಇನ್ನು ಪ್ರಮಾಣವಚನ ಸ್ವೀಕರಿಸದಿರುವುದರಿಂದ ಕಾನೂನು ಪ್ರಕಾರ ಯಾವ ಮಾನ್ಯತೆ ಇಲ್ಲ.ಹಾಗಾಗಿ ತಮ್ಮ ವಾಡ್೯ ನ ಅಭಿವೃದ್ಧಿ ಕೆಲಸ,ಸಾರ್ವಜನಿಕರ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ,ಸದಸ್ಯರಾಗಿ ಒಂದಷ್ಟು ಅನುಭವವುಳ್ಳವರು ಅಧಿಕಾರಗಳಿಗೆ ಒತ್ತಡ ಹೇರಿ ತಮ್ಮ ವಾಡ್೯ನ ಜನರ ಕೆಲಸ ಮಾಡಿಸಿಕೊಳ್ಳುತ್ತಾರೆ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯದೆ ಪುರಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ.
ಪುರವಾಸಿಗಳಿಗೂ ತಮ್ಮ ವಾಡ್೯ ನ ಸದಸ್ಯ ಯಾರೆಂಬುದೇ ಮರೆತಂತಾಗಿದೆ. ಎಲ್ಲದಕ್ಕೂ ಅಧಿಕಾರಿಗಳಿಗೆ ದಂಬಾಲು ಬೀಳಬೇಕಾಗಿದೆ.ನ್ಯಾಯಾಲಯದಲ್ಲಿ ಮೀಸಲಾತಿ ವಿಚಾರ ಇತ್ಯರ್ಥವಾಗಲು ಇನ್ನು ಕನಿಷ್ಠ ಎರಡರಿಂದ ಮೂರು ತಿಂಗಳು ಬೇಕಾಗಬಹುದು ಎಂದು ಪುರಸಭೆಯ ಸದಸರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಸಭೆ ನಡೆಸಿಲ್ಲ: ಬಂಟ್ವಾಳ ಪುರಸಭೆಗೆ ಮಂಗಳೂರು ಸಹಾಯಕ ಕಮಿಷನರ್ ಆಡಳಿತಾಧಿಕಾರಿಯಾಗಿದ್ದಾರೆ.ಅವರಿಗೆ ಚುನಾಯಿತ ಪ್ರತಿನಿಧಿಗಳ ಸಭೆ ಕರೆದು ಸಮಸ್ಯೆಗಳ ಕುರಿತಾಗಿ ಚರ್ಚಿಸುವ ಅವಕಾಶವಿದೆಯಾದರೂ, ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣಾ ಘಟಕದ ವಿವಾದಕ್ಕೆ ಸಂಬಂಧಿಸಿ ಸಹಾಯಕ ಕಮಿಷನರ್ ಸಭೆಯೊಂದನ್ನು ನಡೆಸಿದ್ದು ಬಿಟ್ಟರೆ ಈ ವರೆಗೂ ಅವರು ಸದಸ್ಯರ ಸಭೆ ನಡೆಸಿಲ್ಲ,ಕೊರೋನ ಮಹಾಮಾರಿಯ ಸಂದರ್ಭದಲ್ಲಿ ಸದಸ್ಯರನ್ನು ಕರೆದು ಅಭಿಪ್ರಾಯ ಪಡೆಯಬಹುದಿತ್ತು ಅದನ್ನು ಮಾಡಿಲ್ಲ ಸದಸ್ಯ ವಾಸು ಪೂಜಾರಿ ಹೇಳಿದ್ದಾರೆ.
ಶೀಘ್ರ ಆಯ್ಕೆ ಪ್ರಕ್ರಿಯೆ :
ಮುಂದೆ ಯಾರೂ ಕೂಡ ಸರಕಾರದ ಮೀಸಲಾತಿಯನ್ನು ಪ್ರಶ್ನಿಸದಂತೆ ಮುಖ್ಯಮಂತ್ರಿಯವರು ಸಚಿವ ಸಂಪುಟಸಭೆಯಲ್ಲಿ ಈ ಸಂಬಂಧ ಉಪಸಮಿತಿಯನ್ನು ರಚಿಸಿ ಅದರ ನಿರ್ಣಯವನ್ನು ಹೈಕೋರ್ಟ್ ಗೆ ಸಲ್ಲಿಸಲಾಗುವುದು.ಹಾಗಾಗಿ ಅತೀ ಶೀಘ್ರದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ರಾಜ್ಯದ ಪೌರಾಡಳಿತ ಸಚಿವ ಡಾ.ನಾರಾಯಣ ಗೌಡ ಇತ್ತೀಚೆಗೆ ಬಂಟ್ವಾಳಕ್ಕೆ ಅಗಮಿಸಿದ ಸಂದರ್ಭ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದರು.
