ಬಂಟ್ವಾಳ : ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾಭವನದಲ್ಲಿ ನಡೆದ ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ದ.ಕ.ಜಿಲ್ಲಾ ಸಹಕಾರ ಭಾರತಿ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) ಇವರ ಸಹಭಾಗಿತ್ವದಲ್ಲಿ ಬಂಟ್ವಾಳ ತಾಲೂಕಿನ ಉದ್ಯೋಗ ನೈಪುಣ್ಯ ತರಬೇತಿಯ 2ನೇ ಹಂತದ 4 ವಿಷಯಗಳ ಸಮಾರೋಪ ಸಮಾರಂಭ ನಡೆಯಿತು.
ಸಮಾಜದಿಂದ ಪಡೆದುದ್ದನ್ನು ಸಮಾಜಕ್ಕೆ ನೀಡುವ ಸಂಕಲ್ಪ ಮಾಡುವ, ಎಂದು ಆಶಯ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಜಿಲ್ಲಾ ಕಾರ್ಯವಾಹ, ಸುಭಾಶ್ಚಂದ್ರ ಕಳಂಜ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿವೇಕಾನಂದ ಪಾಲಿಟೆಕ್ನಿಕ್ ಸಂಚಾಲಕ ಮಹಾದೇವ ಶಾಸ್ತ್ರಿ, ವಿವೇಕಾನಂದ ಪಾಲಿಟೆಕ್ನಿಕ್ ನಿಂದ ಈ ತರಬೇತಿಯ ಜೊತೆ, ಕೇಂದ್ರ ಸರಕಾರದ ಸ್ಕಿಲ್ಇಂಡಿಯಾ ತರಬೇತಿ ಯೋಜನೆಯ ಅಡಿಯಲ್ಲಿ ನೂರು ಗಂಟೆಗಳ ತರಬೇತಿ ನೀಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ಸಂಚಾಲಕ, ವಸಂತಮಾಧವ ಅವರು ನಮ್ಮ ಗ್ರಾಮಗಳಲ್ಲಿ ಗ್ರಾಮ ವಿಕಾಸದ ಯೋಜನೆ ಮಾಡುವ ಮೂಲಕ, ಈ ರಾಷ್ಟ್ರದ ಆತ್ಮ ಪ್ರಕಟವಾಗಬೇಕು,ಸ್ವಾಭಿಮಾನ ಹಾಗೂ ಆತ್ಮವಿಕಾಸದ ಭಾವನೆ ನಮ್ಮಲ್ಲಿ ಸಮೃದ್ಧಿ ಹೊಂದಲಿ ಎಂದು ಹಾರೈಸಿದರು.ಸಹಕಾರ ಭಾರತಿ ಬಂಟ್ವಾಳ ತಾಲೂಕು ಅಧ್ಯಕ್ಷ,ಸುಧಾಕರ್ ಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿ ಶುಭ ಹಾರೈಸಿದರು. ಮೊಬೈಲ್ ಫೋನ್ ಸರ್ವಿಸ್ಸಿಂಗ್, ಫುಡ್ ಟೆಕ್ನಾಲಜಿ, ಕಸಿ ಕಟ್ಟುವುದು ಮತ್ತು ಸಿಸಿಟಿವಿ ಅಳವಡಿಕೆಯಲ್ಲಿ 60ಜನರು ತರಬೇತಿ ಪಡೆದು ವಿವೇಕಾನಂದ ಪಾಲಿಟೆಕ್ನಿಕ್ ನ ಪ್ರಮಾಣ ಪತ್ರ ಪಡೆದರು.
ವಿಶ್ವಹಿಂದು ಪರಿಷತ್ ವಿಟ್ಲ ಪ್ರಖಂಡ ಅಧ್ಯಕ್ಷರಾದ ಕ ಕೃಷ್ಣಪ್ಪ ಸ್ವಾಗತಿಸಿದರು. ರಾಕೇಶ್ ಶೆಣೈ ಆಶಯಗೀತೆ ಹಾಡಿದರು. ಬಂಟ್ವಾಳ ತಾಲೂಕು ಸೇವಾ ಪ್ರಮುಖ್ ಮನಮೋಹನ ನಯನಾಡ್ ವಂದಿಸಿದರು. ವಿನೋದ್ ಅಡ್ಕಸ್ಥಳ ಕಾರ್ಯಕ್ರಮ ನಿರೂಪಿಸಿದರು.
