ಕೈಕಂಬ : ಕಳೆದ ಮೂರು ದಿನಗಳಿಂದ ಬಂಟ್ವಾಳ ತಾಲೂಕಿನಾದ್ಯಂತ ಸುರಿಯುತ್ತಿರುವ ಅವ್ಯಾಹತ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿತ ಭೀತಿ ಉಂಟಾಗಿದ್ದು, ಅಪಾಯದಂಚಿನಲ್ಲಿರುವ ಗುಡ್ಡ ಪ್ರದೇಶದ ಮನೆಗಳಿಗೆ ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಸ್ಥಳೀಯಾಡಳಿಕ್ಕೆ ಮನವಿ ಮಾಡಿದ್ದಾರೆ.
ಕರಿಯಂಗಳ ಗ್ರಾಮದ ಬಡಕಬೈಲ್ ಗಾಣೆಮಾರ್ ಎಂಬಲ್ಲಿ ಪೂರ್ಣೇಶ್ವರೀ ಅವರ ಮನೆಯ ಆವರಣ ಗೋಡೆಗೆ ಗುಡ್ಡ ಜರಿದು ಮನೆಗೆ ಬಿದ್ದಿದ್ದು ಅಲ್ಲದೇ ಗುಡ್ಡದ ಮೇಲ್ಗಡೆ ಇರುವ ಚಂದಪ್ಪ ಮುಖಾರಿ ಸಹಿತ ಹಲವು ಮನೆಗಳಿಗೆ ಹಾನಿಯುಂಟಾಗುವ ಸಾಧ್ಯತೆ ಇದೆ ಎಂದು ಪಂಚಾಯತಿ ಅಧಿಕಾರಿಗೆ ದೂರು ನೀಡಿದ್ದಾರೆ.
ಬಡಕಬೈಲ್ ಬೃಹತ್ ತೋಡೊಂದರಲ್ಲಿ ಮಣ್ಣು ತುಂಬಿದ್ದು, ಪ್ರವಾಹ ನೀರು ಉಕ್ಕೇರಿ ಗದ್ದೆ ಪ್ರದೇಶಗಳಿಗೆ ಹರಿಯುತ್ತಿದೆ. ಪರಿಣಾಮ, ಕೃಷಿ ಮಾಡಲಾಗದೆ ಕೃಷಿಕರು ಕಂಗಾಲಾಗಿದ್ದಾರೆ. ಮಣಿಕಂಠಪುರದ ಕಾಂಕ್ರೀಟ್ ರಸ್ತೆಗೆ ಗುಡ್ಡ ಕುಸಿದು ಮಣ್ಣು ಜರಿದು ಬಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಕೆಲವೆಡೆ ಗುಡ್ಡದ ಮರಗಳು ರಸ್ತೆ ಮೇಲೆ ಬಿದ್ದಿವೆ. ವಿದ್ಯುತ್ ಕಂಬ ತುಂಡಾಗಿ ಮರದ ಮೇಲೆ ಬಿದ್ದಿದೆ.
ಕರಿಯಂಗಳ ಗ್ರಾಪಂ ಪಿಡಿಒ ಪದ್ಮಾ ನಾಯಕ್, ಲೆಕ್ಕಾಧಿಕಾರಿ ಸಹಾಯಕ ರೂಪೇಶ್, ತಾ.ಪಂ ಸದಸ್ಯ ಯಶವಂತ ಪೂಜಾರಿ, ಪಂಚಾಯತ್ ಸದಸ್ಯ ಸುರೇಶ್ ಮಣಿಕಂಠಪುರ, ಕಿಶೋರ್ ಪಲ್ಲಿಪಾಡಿ, ವಿಶ್ವನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ತಕ್ಷಣ ಪರಿಹಾರ ಕ್ರಮ ಜರುಗಿಸದಿದ್ದರೆ, ಮುಂದುವರಿದಿರುವ ಮಳೆಗೆ ಇನ್ನಷ್ಟು ಅಪಾಯ ಸಂಭವಿಸಲಿ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.


