ಬಂಟ್ವಾಳ : ಗ್ರಾಮಪಂಚಾಯತ್ ನ ಅವಧಿ ಮುಗಿಯುವ ಆ ಕ್ಷಣ ಅಧ್ಯಕ್ಷರೂ ಸೇರಿದಂತೆ ಎಲ್ಲಾ ಸದಸ್ಯರೂ ಪಕ್ಷ ಬೇಧ ಮರೆತು ಒಂದಾಗಿ ಐದು ವರ್ಷಗಳ ಕಾರ್ಯವನ್ನು ಮೆಲುಕು ಹಾಕಿ ಸಂಭ್ರಮಿಸಿದ ಸನ್ನಿವೇಶವದು.ಈ ಅಪರೂಪದ ಕಾರ್ಯಕ್ರಮ ನಡೆದದ್ದು ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮಪಂಚಾಯತ್ ನಲ್ಲಿ, ಗ್ರಾಪಂ ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಅವರ ನೇತೃತ್ವದಲ್ಲಿ ನಡೆದ ಈ ವಿದಾಯ ಕೂಟ ಹಲವು ವೈಶಿಷ್ಟ್ಯಗಳೊಂದಿಗೆ ದಾಖಲಾಯಿತು.

ಬಿಜೆಪಿ ಬೆಂಬಲಿತರ ವಶದಲ್ಲಿದ್ದ ಅಮ್ಟಾಡಿ ಗ್ರಾಮಪಂಚಾಯತ್ ನಲ್ಲಿ ಕಾಂಗ್ರೇಸ್ ಬೆಂಬಲಿತ ಸದಸ್ಯರೂ ಇದ್ದಾರೆ. ವಿದಾಯ ಕೂಟದ ಈ ಸಂದರ್ಭದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲ ಸದಸ್ಯರು,ಸಿಬ್ಬಂದಿಗಳು,ಗ್ರಾಮಸ್ಥರು ಒಟ್ಟಾಗಿ ಈ ಸಂಭ್ರಮವನ್ನು ಆಚರಿಸಿದರು.ಅಧ್ಯಕ್ಷ ಅವಧಿಯನ್ನು ಪೂರೈಸಿದ ಹರೀಶ್ ಶೆಟ್ಟಿ ಪಡು ರವರು, ಕಳೆದ ಐದು ವರ್ಷಗಳಲ್ಲಿ ತನಗೆ ಸಹಕರಿಸಿದ ಎಲ್ಲ ಸದಸ್ಯರನ್ನು, ಪಿಡಿಒ ಸಹಿತ 14 ಮಂದಿ ಸಿಬ್ಬಂದಿಗಳು, 16 ಮಂದಿ ಪಂಪ್ ಆಪರೇಟರ್ ಗಳು ಸೇರಿದಂತೆ 51 ಮಂದಿಯನ್ನು ಸನ್ಮಾನಿಸಿದರು. ಬಳಿಕ ಗ್ರಾಪಂ ಪರವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕಳೆದ 5 ವರ್ಷಗಳಲ್ಲಿ ಪಕ್ಷರಹಿತವಾಗಿ ಎಲ್ಲಾ ಸದಸ್ಯರು, ಗ್ರಾಮಸ್ಥರು, ಅಧಿಕಾರಿ ವರ್ಗ ಮತ್ತು ವಿಶೇಷವಾಗಿ ಶಾಸಕರ ಸಹಕಾರದಿಂದ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ ಎಂದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಯಶೋಧ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಬಿ, ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಸಹಾಯಕ ಇಂಜಿನಿಯರ್ ಅಜಿತ್ ಕೆ.ಎನ್, ಅಮ್ಟಾಡಿ ಗ್ರಾಮ ಲೆಕ್ಕಾಧಿಕಾರಿ ಶಶಿಕುಮಾರ್, ಕುರಿಯಾಳ ಗ್ರಾಮ ಲೆಕ್ಕಾಧಿಕಾರಿ ಅಮೃತಾಂಶು, ಗ್ರಾ.ಪಂ.ಸದಸ್ಯರು, ಉದ್ಯಮಿಭುವನೇಶ್ ಪಚ್ಚಿನಡ್ಕ,ಸಾಮಾಜಿಕ ಕಾರ್ಯಕರ್ತ ವಿಜಯ್ ಅಮ್ಟಾಡಿ ಮೊದಲಾದವರು ಉಪಸ್ಥಿತರಿದ್ದರು.
