ಕೈಕಂಬ:ರಾಜಕಾರಣದಲ್ಲಿ ಟೀಕೆಗಳು ಸಹಜ. ಕೆಲವು ಸಂದರ್ಭದಲ್ಲಿ ಕಾಮಗಾರಿ ಶೀಘ್ರವಾದರೂ ಟೀಕೆ, ವಿಳಂಬವಾದರೂ ಟೀಕೆ ಕೇಳಿಬರುತ್ತದೆ. ಪಂಪ್ವೆಲ್ ಮೇಲ್ಸೇತುವೆ ವಿಳಂಬ ಹಿನ್ನೆಲೆಯಲ್ಲಿ ನಾನು ಎಲ್ಲ ಕಡೆಯಿಂದ, ಮುಖ್ಯವಾಗಿ ವಿರೋಧಿಗಳಿಂದ ಭಾರೀ ಟೀಕೆ ಆಲಿಸಿದ್ದೇನೆ. ಅಧಿಕಾರಿ ವರ್ಗ ಮತ್ತು ವ್ಯತಿರಿಕ್ತ ರಾಜಕೀಯ ಪರಿಸ್ಥಿತಿಯಿಂದ ಆ ಕಾಮಗಾರಿ ವಿಳಂಬವಾಗಿರುವುದು ಸತ್ಯವಾದರೂ, ನೇರ ಟೀಕೆ ನನ್ನ ಮೇಲೆ ಬಂದಿತ್ತು. ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿರುವ ನಾನು ಮೌನವಾಗಿಯೇ ಆ ಕಾಮಗಾರಿ ಪೂರ್ಣಗೊಳಿಸಿದ್ದೇನೆ ಎಂದು ರಾಜ್ಯಾಧ್ಯಕ್ಷ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು ಅವರು ಶುಕ್ರವಾರ ಮಂಗಳೂರು(ಕುಲಶೇಖರ)-ಮೂಡಬಿದ್ರೆ(ಸೋಲಾಪುರ) ರಾಷ್ಟ್ರೀಯ ಹೆದ್ದಾರಿ 169ರ ಗುರುಪುರದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ನೂತನ ಸೇತುವೆಯನ್ನು ಉದ್ಘಾಟನೆಗೊಳಿಸಿ ಮಾತನಾಡಿದರು. 
ಈಗ ಗುರುಪುರ ಸೇತುವೆ ಅತಿ ಶೀಘ್ರ, ಗಡುವಿಗಿಂತ ಮುಂಚಿತವಾಗಿ ಪೂರ್ಣಗೊಂಡಿದೆ. ಪುಣ್ಯಕ್ಕೆ ಇಲ್ಲಿ ಟೀಕೆಗಳು ಕೇಳಿ ಬಂದಿಲ್ಲ. ಅಚ್ಚರಿಯ ಸಂಗತಿಯೆಂದರೆ, ಪಂಪ್ವೆಲ್ ಮೇಲ್ಸೇತುವೆ ಮೂಲಕ ನನಗೆ ದಿಲ್ಲಿಯಲ್ಲೂ ಪ್ರಸಾರ ಸಿಕ್ಕಿದೆ. ಜನಸೇವೆಯೇ ರಾಜಕೀಯ ಎಂದು ನಂಬಿದ ನಾನು ರಾಜಕಾರಣದಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತ ಬಂದಿದ್ದೇನೆ. ಗುರುಪುರದಲ್ಲಿ ಬೆಳೆದ ನಾನು ಸೇತುವೆ ನಿರ್ಮಾಣದ ಮೂಲಕ ಈ ಪ್ರದೇಶದ ಮಣ್ಣಿನ ಋಣ ತೀರಿಸಿದ್ದೇನೆ ಎಂದು ಭಾವಿಸುತ್ತೇನೆ. ಇದು ಗ್ರಾಮಾಂತರ ಮತ್ತು ನಗರ ಪ್ರದೇಶಕ್ಕೆ ಕೊಂಡಿ(ಸೇತುವೆ) ಎಂದರು.
ಉಸ್ತವಾರಿ ಸಚಿವ ಶ್ರೀನಿವಾಸ ಕೋಟ ಮಾತನಾಡಿ, ಸಂಸದ ನಳಿನ್ ಕುಮಾರ್ ಕಟೀಲ್ ಚುರುಕುತನ ಈ ಸೇತುವೆ ನಿರ್ಮಾಣದಲ್ಲಿ ಬೆಳಕಿಗೆ ಬಂದಿದೆ. ಸೇತುವೆ ಅಭಿವೃದ್ಧಿ ಗ್ರಾಮ ರಾಜ್ಯದ ಕಲ್ಪನೆಗೆ ಪೂರಕವಾದ ಕಾಮಗಾರಿಯಾಗಿದೆ. ಮೊಗರೋಡಿ ಕನ್ಸ್ಟ್ರಕ್ಷನ್ ಕಂಪೆನಿಯ ಮಾಲಕ ಸುಧಾಕರ ಶೆಟ್ಟಿಯವರು ಸೇತುವೆ ನಿರ್ಮಾಣದ ಮೂಲಕ ರಾಜ್ಯದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇದು ಮಂಗಳೂರು ಉತ್ತರ ಕ್ಷೇತ್ರಕ್ಕೆ ಅಭಿಮಾನದ ಸಂಗತಿ ಎಂದರು.
ಈ ಸಂದರ್ಭದಲ್ಲಿ ಗುರುಪುರ ಗೋಳಿದಡಿಗುತ್ತಿನ ಯಜಮಾನ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿಯವರು ಗುರುಪುರ ನಾಗರಿಕರ ಪರವಾಗಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಾ. ಭರತ್ ಶೆಟ್ಟಿ, ಮೊಗರೋಡಿ ಕನ್ಸ್ಟ್ರಕ್ಷನ್ ಕಂಪೆನಿ ಮಾಲಕ ಸುಧಾಕರ ಶೆಟ್ಟಿ ಹಾಗೂ ಎನ್ಎಚ್ ಹಿರಿಯ ಅಧಿಕಾರಿಗಳಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮಾತನಾಡಿ, ಗುರುಪುರ ಪ್ರದೇಶದಲ್ಲಿ ಹೊಸದಾಗಿ ಲೋಕಾರ್ಪಣೆಗೊಂಡ ಈ ಸೇತುವೆ ಸಂಸದ ನಳಿನ್ ಕುಮಾರ್ ಮತ್ತು ಶಾಸಕ ಡಾ. ಭರತ್ ಶೆಟ್ಟಿ ಪರಿಶ್ರಮದ ಫಲವಾಗಿದೆ. ಮೊಗರೋಡಿ ಶೆಟ್ಟಿಯವರ ದಕ್ಷತೆ ಈ ಕಾಮಗಾರಿ ಮೂಲಕ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದರು.
ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಗುರುಪುರದಲ್ಲಿ ಸೇತುವೆ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿರುವ ಸಂಸದ ನಳಿನ್ ಕುಮಾರ್ ಕಟೀಲ್ ಈ ಕಾಮಗಾರಿ ಮೂಲಕ ವಿರೋಧಿಗಳ ಟೀಕೆಗಳಿಂದ ಹೊರ ಬಂದಿದ್ದಾರೆ. ಇವರು ಕೆಲಸಗಳ ಮೂಲಕ ಉತ್ತರಿಸುವ ಜನನಾಯಕ ಎಂಬುದು ಈಗ ಸಾಬೀತಾಗಿದೆ. ಮೊಗರೋಡಿ ಕನ್ಸ್ಟ್ರಕ್ಷನ್ ಕಂಪೆನಿಯ ಪರಿಶ್ರಮ ಮರೆಯುವಂತಿಲ್ಲ ಎಂದರು.
ಗುರುಪುರ ಗೋಳಿದಡಿಗುತ್ತಿನ ಯಜಮಾನ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಸಾರ್ವಜನಿಕರ ಪರವಾಗಿ ವೇದಿಕೆಯಲ್ಲಿದ್ದ ಜನನಾಯಕರು, ಅಧಿಕಾರಿ ವರ್ಗ ಹಾಗೂ ಕಂಪೆನಿ ಮಾಲಕರಿಗೆ ಮೈಸೂರು ಪೇಟ, ಶಾಲು ಹೊದಿಸಿ ಸನ್ಮಾನಿಸಿದರು.
ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಎನ್ಎಚ್ನ ಎಡಬ್ಲ್ಯೂ ರಮೇಶ್, ಎಇ ಕೀರ್ತಿ ಅಮೀನ್, ಇಂಜಿನಿಯರ್ ಜಿ ಎನ್ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಹರಿಕೃಷ್ಣ ಬಂಟ್ವಾಳ, ರಾಜೇಶ್ ಕೊಟ್ಟಾರಿ, ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ತಾಪಂ ಸದಸ್ಯ ಸಚಿನ್ ಅಡಪ, ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್, ರಾಜೇಶ್ ಸುವರ್ಣ ಗುರುಪುರ, ಹರೀಶ್ ಮೂಡುಶೆಡ್ಡೆ, ಶ್ರೀಕರ ಶೆಟ್ಟಿ ಗುರುಪುರ, ಸೋಹನ್ ಅಥಿಕಾರಿ, ಸೋಮಯ್ಯ, ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ,ಮುರಳಿಧರ ಶೆಟ್ಟಿ ಎಡಪದವು, ಚಂದ್ರಹಾಶ ಶೆಟ್ಟಿ ನಾರಳ, ಸುಕೇಶ್ ಚೌಟ, ಚಮದ್ರಶೇಖರ ಶೆಟ್ಟಿ ಮತ್ತಿತರರು ಇದ್ದರು. ವಿಶ್ವ ಹಿಂದೂ ಪರಿಷತ್ ಮುಖಂಡ ಜಗದೀಶ ಶೇಣವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
