ಕೈಕಂಬ : ಮೂರು ವರ್ಷದ ಹಿಂದೆ ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಪೂರ್ವೋತ್ತರ ಮೀಮಾಂಸಕ ಶ್ರೀ ಕೆ ಎಸ್ ನಿತ್ಯಾನಂದರ ಮಾರ್ಗದರ್ಶನದಲ್ಲಿ ಗುರುಪುರದ ಕಾರಮೊಗರುವಿನಲ್ಲಿ ಸ್ಥಾಪನೆಗೊಂಡಿರುವ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶೀಘ್ರವೇ ಶ್ರೀ ಮಹಾ ಕಾಲಭೈರವ ದೇವರ ಪ್ರತಿಷ್ಠೆ ನಡೆಯಲಿದೆ.
ಮೂಳೂರು ಗ್ರಾಮಕ್ಕೆ `ಮಹಾಶಕ್ತಿ’ ಕೇಂದ್ರ ಬಿಂದುವಾಗಿದ್ದು, ಇಲ್ಲಿ ನೆಲೆಯಾಗಿರುವ ಶ್ರೀ ಅಗ್ನಿದುರ್ಗೆ ಎಂಬ ಮಹಾಶಕ್ತಿಯೊಂದಿಗೆ ಶ್ರೀ ಮಹಾ ಕಾಲಭೈರವ ಪ್ರತಿಷ್ಠಾಪನೆಯಾಗಬೇಕು. ಆಗಲೇ ಈ ಕ್ಷೇತ್ರಕ್ಕೆ ಪೂರ್ಣತೆ ಬರುವುದೆಂದು ಕ್ಷೇತ್ರದಲ್ಲಿಡಲಾದ ಪ್ರಶ್ನಾ ಚಿಂತನೆಯಿಂದ ತಿಳಿದು ಬಂದಿರುತ್ತದೆ. ಎಲ್ಲಿ ಮಹಾಕಾಳಿ ಸ್ವರೂಪಿಣಿಯಾದ ಶ್ರೀ ಅಗ್ನಿದುರ್ಗೆ ನೆಲೆಯಾಗುತ್ತಾಳೋ ಅಲ್ಲಿ ಶ್ರೀ ಮಹಾ ಕಾಲಭೈರವನ ಸ್ಥಾಪನೆಯಾಗಬೇಕು ಎಂಬುದು ವಿಧಿತ. ಫಲ್ಗುಣಿ ನದಿ ತಟದಲ್ಲಿರುವ ಈ ದೇವಸ್ಥಾನದಲ್ಲಿ ಇವರೆಡು ದೇವರ ಪ್ರತಿಷ್ಠಾಪನೆಯಿಂದ ಮೂಳೂರು ಗ್ರಾಮವಾಸಿಗಳಿಗೆ ಸುಭಿಕ್ಷೆಯಾಗಲಿದೆ ಎಂಬುದು ಪ್ರಾಜ್ಞರ ಅಭಿಪ್ರಾಯವೆಂದು ದೇವಸ್ಥಾನದ ಆಡಳಿತ ಮೋಕ್ತೇಸರ ಡಾ. ರವಿರಾಜ ಶೆಟ್ಟಿ ಕಾರಮೊಗರುಗುತ್ತು ಹೇಳಿದರು.
ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ಟ್ರಸ್ಟ್ ಮೂಲಕ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಯಾಗಲಿರುವ ಶ್ರೀ ಮಹಾ ಕಾಲಭೈರವ ದೇವರ ಮೂರ್ತಿಯ ಶಿಲ್ಪ ಕೆತ್ತನೆ ಕೆಲಸ ಕಾರ್ಕಳದಲ್ಲಿ ಈಗಾಗಲೇ ಆರಂಭಗೊಂಡಿದೆ. ಬಿಹಾರ ಮೂಲದ ಶಿಲ್ಪಿ ಶ್ರೀ ಲಕ್ಷ್ಮಣ್ ಶರ್ಮ ಮೂರ್ತಿ ಕೆತ್ತನೆಯ ಕುಸುರಿ ಕೆಲಸದಲ್ಲಿ ತೊಡಗಿದ್ದಾರೆ.
ದೇವಸ್ಥಾನದ ಟ್ರಸ್ಟ್, ಗುತ್ತುಗಳ ಯಜಮಾನರು, ಕಾರಮೊಗರುಗುತ್ತು ಕುಟುಂಬಿಕರು ಹಾಗೂ ಊರ ಹತ್ತುಸಮಸ್ತರ ಒಳಗೊಳ್ಳುವಿಕೆ ಈ ಪುಣ್ಯ ಕಾರ್ಯದಲ್ಲಿರುತ್ತದೆ ಎಂದು ಡಾ. ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
