ಬಂಟ್ವಾಳ: ಲಾಕ್ಡೌನ್ ಪರಿಣಾಮದಿಂದ ಸಂಕಷ್ಟಕ್ಕೊಳಗಾಗಿರುವ ಬೀಡಿ ಕಾರ್ಮಿಕರಿಗೆ ಕನಿಷ್ಠ ತಲಾ ೧೦ ಸಾವಿರ ರೂ.ಗಳ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಬಂಟ್ವಾಳ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯು ಬುಧವಾರ ಬಿ.ಸಿ.ರೋಡಿನಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.

ದ.ಕ.ಹಾಗೂ ಉಡುಪಿ ಜಿಲ್ಲೆಯಲ್ಲಿ ಬೀಡಿ ಉದ್ಯಮವನ್ನೇ ನಂಬಿ ಜೀವನ ಸಾಗಿಸುತ್ತಿರುವ ಸುಮಾರು ೪ ಲಕ್ಷ ಬೀಡಿ ಕಾರ್ಮಿಕರ ಕುಟುಂಬದ ಬದುಕು ದುಸ್ಥರವಾಗಿದೆ. ಪ್ರಸ್ತುತ ಸರಕಾರವು ಪಡಿತರದ ಮೂಲಕ ಅಕ್ಕಿ, ಬೇಳೆ, ಗೋಽಯನ್ನು ನೀಡಿದರೂ, ಇತರ ವಸ್ತುಗಳ ಬೆಲೆ ದುಬಾರಿಯಾಗಿದೆ.ಲಾಕ್ಡೌನ್ ಸಡಿಲಿಕೆಯ ಬಳಿಕ ಎಲ್ಲಾ ಮಾಲಕರು ಸರಿಯಾದ ಕೆಲಸ ನೀಡುತ್ತಿಲ್ಲ. ಜತೆಗೆ ಎ. ೧ರಿಂದ ಬೆಲೆ ಏರಿಕೆ ಸೂಚ್ಯಂಕಕ್ಕನುಗುಣವಾಗಿ ಸಿಗಬೇಕಾದ ತುಟ್ಟಿ ಭತ್ತಿಯನ್ನೂ ಜಾರಿ ಮಾಡಿಲ್ಲ.
ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಸರಕಾರ ನೀಡಿರುವ ಪರಿಹಾರದಲ್ಲಿ ಬೀಡಿ ಕಾರ್ಮಿಕರ ವಿಚಾರವನ್ನೇ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ಸರಕಾರ ತತ್ಕ್ಷಣ ತಲಾ ೧೦ ಸಾವಿರ ರೂ.ಗಳ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಕಳೆದ ವರ್ಷದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ೫ ಲಕ್ಷ ರೂ.ಗಳ ಮಂಜೂರು ಆದೇಶ ನೀಡಿದರೂ, ಕೇವಲ ೨ ಲಕ್ಷ ರೂ. ಮಾತ್ರ ಸರಕಾರಿಂದ ಪಾವತಿಯಾಗಿದೆ. ಉಳಿದ ೩ ಲಕ್ಷ ರೂ.ಗಳನ್ನು ಸರಕಾರ ತತ್ಕ್ಷಣ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿ ನೀಡುವ ವೇಳೆ ಸಮಿತಿಯ ಸಂಚಾಲಕರಾದ ಬಿ.ಶೇಖರ್, ಪ್ರಭಾಕರ ದೈವಗುಡ್ಡೆ, ರಾಮಣ್ಣ ವಿಟ್ಲ, ರಾಜಾ ಚಂಡ್ತಿಮಾರ್, ಹರೀಶ್ ಅಜ್ಜಿಬೆಟ್ಟು, ವಿವಿಧ ಸಂಘಟನೆಗಳ ಪ್ರಮುಖರಾದ ಲೋಕೇಶ್ ಸುವರ್ಣ, ಹಾರೂನ್ ರಶೀದ್, ಇಸ್ಮಾಯಿಲ್, ಶಫೀಕ್ ಆಲಡ್ಕ, ಸರೋಜಿನಿ ನೋರ್ನಡ್ಕ, ಬಿ.ಬಾಬು ಭಂಡಾರಿ, ಸುರೇಂದ್ರ ಪೂಜಾರಿ ಬಂಟ್ವಾಳ, ಎಂ.ಬಿ.ಭಾಸ್ಕರ್, ವಿನ್ಸೆಂಟ್ ರೊಡ್ರಿಗಸ್, ಸುಂದರ ಪೂಜಾರಿ ಸಿದ್ಧಕಟ್ಟೆ, ವೆಂಕಪ್ಪ ಪೂಜಾರಿ ಬಂಟ್ವಾಳ ಮೊದಲಾದವರಿದ್ದರು.
