ಕುಪ್ಪೆಪದವು: ಇಲ್ಲಿನ ಅನಂತ ಪಾರ್ಶ್ವ ಜೈನ್ ಮಿಲನ್ ಆಶ್ರಯದಲ್ಲಿ ಇಲ್ಲಿನ ಪ್ರಸಿದ್ಧ ಅಗರಿ ಮನೆಯಲ್ಲಿ ಕೊರೋನ ಸಂಕಷ್ಟ ಪರಿಹಾರ ನಿಮಿತ್ತ ಶಾಂತಿಧಾರ ಆರಾಧನೆ ಅಭಿಷೇಕ ವಿಶೇಷ ಧಾರ್ಮಿಕ ಪೂಜಾ ವಿಧಿ ಆದಿತ್ಯವಾರ ಜರುಗಿತು.ಶಾಂತಿ ಪ್ರಸಾದ್ ಸಹೋದರರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. 

ಭಗವಾನ್ ಪಾರ್ಶ್ವನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರಿಗೆ ಜಲ, ಬೇಳೆ, ಇಕ್ಷು ರಸ, ನಾರೀಕೇಳ, ಷಡ್ಕರ, ದೃತ, ಕ್ಷೀರ, ಅರಶಿಣ, ಚಂದನ, ಅಷ್ಟಗಂಧ, ಶ್ರೀ ಗಂಧ, ಕಷಾಯ, ಹೀಗೆ ಹನ್ನೆರಡು ಸುವಸ್ತು ಗಳಿಂದ ಅಭಿಷೇಕ ನಡೆಸಿ ಅಂತಿಮವಾಗಿ ಪೂರ್ಣಕುಂಭ ಅಭಿಷೇಕ ನಡೆಸಿ, ಲೋಕ ಕಂಟಕವಾದ ಕೊರೊನಾ ಮಹಾಮಾರಿಯ ನಿವಾರಣೆಗಾಗಿ ಪ್ರಾರ್ಥಿಸಲಾಯಿತು. 

ಇದೆ ವೇಳೆ ಜರುಗಿದ ಜೈನ್ ಮಿಲನ್ ನ ಮಾಸಿಕ ಸಭೆಯು ಮಿಲನ್ ಅಧ್ಯಕ್ಷರಾದ ಭೋಜರಾಜ್ ಜೈನ್ ಕುಪ್ಪೆಪದವು ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಭಾಗವಹಿದ್ದ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ಮಾತನಾಡಿ ಕೊರೋನ ಕಾರ್ಮೋಡ ಸಂಕಷ್ಟದಲಿ ಇಂತಹ ಧಾರ್ಮಿಕ ಕಾರ್ಯಕ್ರಮ ಅರ್ಥಪೂರ್ಣವು ಔಚಿತ್ಯಪೂರ್ಣವಾಗಿದ್ದು ಪ್ರಾಯಶ ಮಿಲನ್ ಗಳ ಆಶ್ರಯದಲ್ಲಿ ರಾಜ್ಯದಲ್ಲಿಯೇ ಪ್ರಥಮ ಕಲ್ಪನೆಯೂ ಪ್ರಯತ್ನವು ಆಗಿದೆ ಎಂದು ಅಭಿಪ್ರಾಯ ಪಟ್ಟರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಜಗೋಳಿ ಜೈನ್ ಮಿಲನ್ ಅಧ್ಯಕ್ಷ ಭರತ್ ರಾಜ್ ಮಾತನಾಡಿದರು. ಪೂಜಾ ವಿಧಿವಿಧಾನಗಳನ್ನು ನಡೆಸಿದ ಶಾಂತಿಪ್ರಸಾದ್ ಸಹೋದರರನ್ನು ಈ ಸಂದರ್ಭದಲ್ಲಿ ಗೌರವಿಸಲಾಯ್ತು.ಸಭೆಯಲ್ಲಿ ಅಗರಿ ಮನೆತನದ ಪ್ರವೀಣ್ ಕುಮಾರ್, ಶ್ರೀಪಾಲ್ ಕಂಬಳಿ, ಅಜಿತ್ ಕುಮಾರ್ ಮತ್ತಿತರರಿದ್ದರು.
