ಬಂಟ್ವಾಳ : ಕೊರೋನಾ ಲಾಕ್ಡೌನ್ ಸಮಯದಲ್ಲಿ ಜನ ಉದ್ಯೋಗ-ಆರ್ಥಿಕ ಪರಿಸ್ಥಿತಿ ಸಮರ್ಪಕವಾಗಿಲ್ಲದ ಪರಿಣಾಮ ಜನ ಸಾಮಾನ್ಯರು ಅದರಲ್ಲೂ ಮಧ್ಯಮ ವರ್ಗದ ಜನ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಬಂಟ್ವಾಳ ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಯುವ ಉದ್ಯಮಿ, ಇಕ್ಬಾಲ್ ನಿಶ್ಬಾ ಅವರು ತನ್ನ ಒಡೆತನದ ವಸತಿ ಹಾಗೂ ವಾಣಿಜ್ಯ ಸಂಕೀರ್ಣದಲ್ಲಿರುವ ಬಾಡಿಗೆದಾರರ ಪಾಲಿಗೆ ಆಪದ್ಭಾಂಧವರಾಗಿ ಸಹಕರಿಸಿದ್ದು, 2 ತಿಂಗಳುಗಳ ಬಾಡಿಗೆಯನ್ನು ಸಂಪೂರ್ಣ ಮನ್ನಾ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸೈಮ್ ಗ್ರೂಪ್ ಆಫ್ ಕಂಪೆನಿಯ ಸಿಇಒ ಆಗಿರುವ ಇವರು ತನ್ನ ಒಡೆತನದ ಬಂಟ್ವಾಳ, ಬಿ ಸಿ ರೋಡು, ಮಂಗಳೂರು ಹಾಗೂ ಉಪ್ಪಳದಲ್ಲಿರುವ ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಾಡಿಗೆದಾರ, ಮಧ್ಯಮ ವರ್ಗದ ಕುಟುಂಬಗಳ ಸಂಕಷ್ಟವನ್ನು ಸ್ವತಃ ಅರಿತುಕೊಂಡು ಲಾಕ್ಡೌನ್ ಸಂದರ್ಭದ ಎರಡು ತಿಂಗಳುಗಳ ಬಾಡಿಗೆ ಮನ್ನಾ ಮಾಡುವ ಮನೋಭಾವ ತೋರಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಾಮಾಜಿಕ ಕಳಕಳಿಯುಳ್ಳ ಇಕ್ಬಾಲ್ ಅವರು ಲಾಕ್ಡೌನ್ ಸಂದರ್ಭ ತನ್ನ ಸ್ವಂತ ಊರಾದ ಬಂಟ್ವಾಳ ಕೆಳಗಿನಪೇಟೆಯಲ್ಲಿ ಬಂಟ್ವಾಳ ಜಮಾಅತ್ ಹಾಗೂ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸ್ಥಾಪಿಸಲಾದ ಲಾಕ್ಡೌನ್ ರಿಲೀಫ್ ಫಂಡ್ಗೂ ಕೂಡಾ ಆರ್ಥಿಕ ನೆರವನ್ನು ನೀಡಿದ್ದಲ್ಲದೆ ಊರಿನ ಪ್ರತಿಯೊಂದು ಸೇವಾ ಚಟುವಟಿಕೆಗಳಿಗೂ ಸಹಕಾರವನ್ನು ನೀಡುತ್ತಿದ್ದಾರೆ. ಇದೀಗ ಲಾಕ್ಡೌನ್ ನಿಂದ ಸಂಕಷ್ಟದ ಸಮಯದಲ್ಲಿ ತನ್ನ ಒಡೆತನದ ಕಟ್ಟಡಗಳಲ್ಲಿರುವವರ ಪಾಲಿಗೆ ಆಪದ್ಬಾಂಧವರಾಗುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

