ಕೈಕಂಬ : ಕೊರೋನಾ ವೈರಸ್ ಲಾಕ್ಡೌನ್ ಸಂದಿಗ್ಧತೆಯ ಹೊತ್ತಲ್ಲೇ ಕಾರ್ಮಿಕ ವಿರೋಧಿ ನೀತಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಸಿಐಟಿಯುನ ಕಾರ್ಮಿಕ ಸಂಘಗಳ ಜಂಟಿ ಸಮಿತಿ(ಜೆಸಿಟಿಸಿ) ಶುಕ್ರವಾರ ಸಾಂಕೇತಿಕ ಅಖಿಲ ಭಾರತ ಮುಷ್ಕರ ನಡೆಸಿ, ಪ್ರಧಾನಿಗೆ ಮನವಿ ಸಲ್ಲಿಸಿತು.
ಕೆಲಸದ ಅವಧಿ ಹೆಚ್ಚಿಸಿ ಕಾರ್ಮಿಕ ಕಾನೂನುಗಳಲ್ಲಿ ತಿದ್ದುಪಡಿ ಮಸೂದೆ ರೂಪಿಸಲಾಗಿದ್ದು, ಇದು ಕಾರ್ಮಿಕ ವಿರೋಧಿಯಾಗಿದೆ ಎಂದಿರುವ ಸಮಿತಿ, ಕೆಲಸದ ಅವಧಿ ಹೆಚ್ಚಿಸಬಾರದು, ಕಾರ್ಮಿಕ ವೇತನ ಕಡಿತ ಮಾಡಬಾರದು, ಗುತ್ತಿಗೆ ಕಾರ್ಮಿಕರ ಸಹಿತ ಯಾವುದೇ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಬಾರದು, ಕೈಗಾರಿಕಾ ವಿವಾದಗಳ ಕಾಯ್ದೆಯ ಪರಿಚ್ಛೇದ 5(ಬಿ)ಅನ್ವಯ ಮಾಲಕರಿಗೆ ವಿನಾಯತಿ ನೀಡಬಾರದು.100ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುವ ಸಂಸ್ಥೆಗಳಲ್ಲಿ ಸರ್ಕಾರದ ಅನುಮತಿ ಇಲ್ಲದೆ ಲೇ-ಅಪ್ ರಿಟ್ರೆಂಚ್ಮೆಂಟ್ ಹಾಗೂ ಮುಚ್ಚಲು ಅವಕಾಶ ನೀಡಬಾರದು, ಅಸಂಘಟಿತ ಕಾರ್ಮಿಕರಿಗೆ ನೇರ ಆರ್ಥಿಕ ನೆರವು ನೀಡಬೇಕು ಮತ್ತು ಕಾರ್ಮಿಕರಿಗೆ ಭದ್ರತೆ ನೀಡಬೇಕು ಎಂಬಿತ್ಯಾದಿ ಬೇಡಿಕೆ ಮುಂದಿಟ್ಟಿದೆ.
ಸಮಿತಿ ಪರವಾದ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ನಿಟ್ಟಿನಲ್ಲಿ ಗುರುಪುರ ಕೈಕಂಬದ ನಾಡಕಚೇರಿ ಉಪ-ತಹಶೀಲ್ದಾರ್ಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಿಐಟಿಯು ಗುರುಪುರ ವಲಯ ಅಧ್ಯಕ್ಷ ಕೆ ಗಂಗಯ್ಯ ಅಮೀನ್, ಕಾರ್ಯದರ್ಶಿ ನೋಣಯ್ಯ ಗೌಡ, ಪ್ರಮುಖರಾದ ಬಾಬು ಪೂಜಾರಿ, ರಮೇಶ್ ನಾಯ್ಕ್, ಕೆ ಸದಾಶಿವ ದಾಸ್ ಉಪಸ್ಥಿತರಿದ್ದರು.