ಬಂಟ್ವಾಳ : ಕೊರೊನಾ ಆತಂಕದ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿದ್ದು, ಬಂಟ್ವಾಳ ತಾಲೂಕಿನಲ್ಲಿ ಜನತೆ ಗುರುವಾರ ಬೆಳಗ್ಗಿನ ಹೊತ್ತು ಆಹಾರ ಸಾಮಾಗ್ರಿಗಳನ್ನು ಖರೀದಿಸಿದರು. ಹೀಗಾಗಿ ತಾಲೂಕು ಕೇಂದ್ರ ಬಿ.ಸಿ.ರೋಡು ಸೇರಿದಂತೆ ಬಂಟ್ವಾಳ ಪೇಟೆ, ಕೈಕಂಬಗಳಲ್ಲಿ ಕಾರ್ಯಚಟುವಟಿಕೆ ಕಂಡುಬಂತು. 
ಮೆಡಿಕಲ್ ಶಾಪ್ಗಳು ಹಾಗೂ ಪೆಟ್ರೋಲ್ ಬಂಕ್ಗಳು ಎಂದಿನಂತೆ ಕಾರ್ಯಾಚರಣೆ ನಡೆಸಿದ್ದವು. ಬೆಳಗ್ಗಿನ ಹೊತ್ತು ಜನತೆ ದಿನಸಿ ಸಾಮಾಗ್ರಿಗಳು ಸೇರಿದಂತೆ ಔಷಧಗಳು, ಮೀನು, ಮಾಂಸ ಖರೀದಿ ನಡೆಸಿದರು. ಮಧ್ಯಾಹ್ನ ೧೨ರ ಬಳಿಕ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಪೊಲೀಸರು ಮೈಕ್ ಮೂಲಕ ರಸ್ತೆಯುದ್ದಕ್ಕೂ ಘೋಷಣೆ ಕೂಗುತ್ತಾ ಜನರನ್ನು ಎಚ್ಚರಿಸಿದರು. ಮಧ್ಯಾಹ್ನ ಬಳಿಕ ಇಡೀ ತಾಲೂಕಿನಲ್ಲಿ ಸಂಪೂರ್ಣ ಬಂದ್ ಆಗಿತ್ತು.
ಬೆಳಗ್ಗಿನ ಹೊತ್ತು ದಿನಸಿ ಸಾಮಾನು ಖರೀದಿಗೆ ಆಗಮಿಸುವವರಿಗಾಗಿ ಆಟೋಗಳು ಸಂಚಾರ ನಡೆಸಿದವು. ಉಳಿದಂತೆ ರಾಷ್ಟ್ರೀಯ ಹೆದ್ದಾರಿ ಸೇರಿ ಯಾವುದೇ ರಸ್ತೆಗಳಲ್ಲಿ ವಾಹನಗಳ ಸಂಚಾರ ಇರಲಿಲ್ಲ. ಬ್ಯಾಂಕ್, ಕೆಲವೊಂದು ಸಹಕಾರಿ ಸಂಸ್ಥೆಗಳು ಮಧ್ಯಾಹ್ನದವರೆಗೆ ಅಗತ್ಯ ಸೇವೆಗಳ ದೃಷ್ಟಿಯಿಂದ ಕಾರ್ಯಾಚರಣೆ ನಡೆಸಿದ್ದವು. ಬಿ.ಸಿ.ರೋಡ್ ನ ಸ್ಟೇಟ್ ಬ್ಯಾಂಕ್ ನಲ್ಲಿ ತಲಾ ಒರ್ವ ಗ್ರಾಹಕನಿಗೆ ಮಾತ್ರ ಒಳಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು,ಉಳಿದವರಿಗೆ ಹೊರಭಾಗದಲ್ಲಿ ಅಂತರ ಕಾಯ್ದಯಕೊಂಡು ಕುಳಿತುಕೊಂಡು ಸರದಿಯಂತೆ ವ್ಯವಹಾರ ನಡೆಸಬೇಕಾಗಿತ್ತು.
ಕಳೆದೆರಡು ದಿನಗಳಲ್ಲಿ ಸಂಜೆಯ ವೇಳೆಗೆ ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಡುತ್ತಿದ್ದವರಿಗೆ ಲಾಠಿ ಚಾರ್ಜ್ ನಡೆಸಿದ ಘಟನೆಯೂ ನಡೆದಿತ್ತು. ಜತೆಗೆ ಅಲ್ಲಲ್ಲಿ ಪೊಲೀಸರು ನಿಂತು ಅನಗತ್ಯವಾಗಿ ತಿರುಗಾಡುತ್ತಿರುವರಿಗೆ ಎಚ್ಚರಿಕೆ ನೀಡುವ ಕಾರ್ಯವನ್ನೂ ನಡೆಸಿದ್ದರು. ಬಂಟ್ವಾಳ ಎಸ್ಕೆಎಸ್ಎಸ್ಎಫ್ ವಿಂಗ್ನಿಂದ ತೊಂದರೆಗೊಳಗಾಗಿ ಪೇಟೆಯಲ್ಲಿ ಉಳಿದವರು, ನಿರ್ಗತಿಕರು, ಭಿಕ್ಷುಕರಿಗೆ ಊಟ, ನೀರನ್ನು ವಿತರಿಸಲಾಯಿತು. ಜತೆಗೆ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿದರು.
