ಬಂಟ್ವಾಳ: ಇಲ್ಲಿನ ಗ್ರಾಮಾಂತರ ಮತ್ತು ನಗರ ಪೊಲೀಸ್ ಠಾಣಾ ವ್ಯಾಪ್ತಿಗೊಳಪಟ್ಟು ತಾಲೂಕಿನ ನರಿಕೊಂಬು ಮತ್ತು ಗ್ರಾಮದಲ್ಲಿ ಸರಣಿ ಕಳವಿಗೆ ವಿಫಲಯತ್ನ ನಡೆದಿರುವ ಘಟನೆ ಬುಧವಾರ ರಾತ್ರಿ ಮತ್ತು ಗುರುವಾರ ಮುಂಜಾನೆಯ ನಡುವೆ ಸಂಭವಿಸಿದೆ.
ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನರಿಕೊಂಬುಗ್ರಾಮದ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ಮುಂಭಾಗದ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಕಚೇರಿಯಲ್ಲಿದ್ದ ಕಪಾಟಿನ ಬಾಗಿಲನ್ನು ಮುರಿದು ಅದರಲ್ಲಿದ್ದ ಪುಸ್ತಕವನ್ನೆಲ್ಲಾ ಕೊಠಡಿಯಲ್ಲಿ ಚೆಲ್ಲಾಪಿಲ್ಲಿ ಮಾಡಿ ನಗದು ಹಣಕ್ಕಾಗಿ ಶೋಧಿಸಿದ್ದಾರೆ. ಆದರೆ ಯಾವುದೇ ನಗದು ಪತ್ತೆಯಾಗದಿರುವುದರಿಂದ ಪುಸ್ತಕವನ್ನು ಹಾಗೆ ಬಿಟ್ಟು ತೆರಳಿದ್ದಾರೆ.
ಹಾಗೆಯೇ ಅಲ್ಲೆ ಪಕ್ಕದ ವಿವೇಕ ಜಾಗೃತ ಬಳಗದ ಕಚೇರಿಯ ಬಾಗಿಲನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಅಲ್ಲಿದ್ದ ಕಾಣಿಕೆ ಡಬ್ಬಿಯನ್ನು ಹೊತ್ತೊಯ್ದಿದಿದ್ದಾರೆ.ಆದೇ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಶಂಭೂರು ದ.ಕ.ಜಿ.ಪ.ಹಿ.ಪ್ರಾ.ಶಾಲೆಯ ಮುಂಭಾಗಿಲನ್ನು ಮುರಿದು ಕಳವಿಗೆ ವಿಫಲ ಯತ್ನ ನಡೆಸಿದ್ದಾರೆ.ಪಕ್ಕದ ಅಂಗನವಾಡಿ ಹಾಗೂ ಶ್ರೀರಾಮ ಭಜನಾ ಮಂದಿರದಲ್ಲು ಕಳ್ಳರು ಬಾಗಿಲು ಮುರಿದು ಕಳವಿಗೆ ವಿಫಲಯತ್ನ ನಡೆಸಿ ಬರಿಗೈಯಲ್ಲಿ ಪರಾರಿಯಾಗಿದ್ದಾರೆ.
ಸುದ್ದಿ ತಿಳಿದ ನಗರ ಠಾಣೆಯ ಎಸ್ ಐ ಅವಿನಾಶ್ ಹಾಗೂ ಗ್ರಾಮಾಂತರ ಠಾಣೆಯೆ ಎಸ್ ಐ ಪ್ರಸನ್ನ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.ಹಾಗೆಯೇ ಶಿಕ್ಷಣಾಧಿಕಾರಿ ಜ್ಙಾನೇಶ್ ಅವರು ಕಳವಿಗೆ ವಿಫಲಯತ್ನ ನಡೆದ ಶಾಲೆಗೆ ಭೇಟಿ ನೀಡಿ ಪರಿಶಿಒಲಿಸಿದ್ದಾರೆ. ಈ ಎಲ್ಲಾ ಪ್ರಕರಣದ ಬಗ್ಗೆ ನಗರ ಮತ್ತು ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.
