ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೆಪ್ಟಂಬರ್ ೧೮ರಂದು ಬಂಟ್ವಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ರೂ. ೧೭.೨೨ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಮುಚ್ಚು ಹರಾಜುಕಟ್ಟೆಯಲ್ಲಿ ಶೌಚಾಲಯದ ಕೊರತೆಯಿಂದ ಸಂತೆ ಮಾರಾಟಗಾರರು ಸಹಿತ ಗ್ರಾಹಕರಿಗೆ ತೊಂದರೆ ಆಗಿದೆ.
ದೂರದೂರಿಂದ ಬರುವ ಮಾರಾಟಗಾರರು, ಗ್ರಾಹಕರು ತಮ್ಮ ಬಹಿರ್ದೆಸೆಗೆ ಗುಡ್ಡ ಪ್ರದೇಶ ಇಲ್ಲವೇ ಬಯಲು ಪ್ರದೇಶವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಸಂತೆ ಮಾರುಕಟ್ಟೆಯ ಕಟ್ಟಡ ಈಗಾಗಲೇ ಮಣಿನಾಲ್ಕೂರು ಗ್ರಾಮ ಪಂಚಾಯತ್ಗೆ ಹಸ್ತಾಂತರಗೊಂಡಿದ್ದು, ಕಳೆದ ಹರಾಜು ಕಟ್ಟೆಯಲ್ಲಿ ವಾರದ ಸಂತೆ ಕೂಡ ಆರಂಭವಾಗಿದೆ.ಮೊದಲಿಗೆ ಕೆಲವೇ ಕೆಲವು ಸಂತೆ ವ್ಯಾಪಾರಿಗಳು ಬಂದಿದ್ದು ಈಗ ವಾರದಿಂದ ವಾರಕ್ಕೆ ಸಂತೆಕಟ್ಟೆಯಲ್ಲಿ ಮಾರಾಟ ಮಾಡುವವರ ಸಂಖ್ಯೆಯು ಹೆಚ್ಚುತ್ತಾ ಹೋಗಿದೆ.
ಸ್ಥಳೀಯವಾಗಿ ಮಂಗಳವಾರ ಯಾವುದೇ ಸಂತೆ ಇಲ್ಲದಿರುವುದರಿಂದ ಸಂತೆ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಈ ದಿನವನ್ನು ನಿಗದಿ ಪಡಿಸಲಾಗಿದೆ.ಉಪ್ಪಿನಂಗಡಿ, ಬೆಳ್ತಂಗಡಿ, ಪುತ್ತೂರು, ಕಲ್ಲಡ್ಕ, ಸುಳ್ಯ, ವಾಮದಪದವು, ಮೂಡಬಿದ್ರೆ, ಹೀಗೆ ನಾನಾ ಕಡೆಗಳಿಂದ ಬರುವ ಸಂತೆ ವ್ಯಾಪಾರಿಗಳು ಮಣಿನಾಲ್ಕೂರು ಸಂತೆ ಕಟ್ಟೆಯಲ್ಲಿ ಠಿಕಾಣಿ ಹೂಡಿ ವ್ಯಾಪಾರದಲ್ಲಿ ನಿರತರಾಗಿರತ್ತಾರೆ. ಈಗ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಗ್ರಾಮೀಣ ಭಾಗದ ಜನರು ತರಕಾರಿ ಸಹಿತ ಗ್ರಹ ಬಳಕೆಯ ಸಾಮಾಗ್ರಿಗಳನ್ನು ಪಡೆದುಕೊಳ್ಳಲು ಬರುತ್ತಿದ್ದು ಮಧ್ಯಾಹ್ನ ನಂತರ ಗ್ರಾಹಕರ ಸಂಖ್ಯೆ ಕಡಿಮೆ ಇರುತ್ತದೆ.
ಶೌಚಾಲಯ ಮತ್ತು ವಿದ್ಯುತ್ ಸಂಪರ್ಕ ಇಲ್ಲ : ೧೭.೨೨ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಮುಚ್ಚು ಹರಾಜು ಸಂತೆಕಟ್ಟೆಗೆ ವಿದ್ಯುತ್ ಸಂಪರ್ಕವೂ ಇದುವರೆಗೂ ಆಗಿಲ್ಲ, ವಗ್ಗ ಸಂತೆ ಕಟ್ಟೆಯ ನಂತರ ಇರುವುದು ಉಪ್ಪಿನಂಗಡಿ ಸಂತೆಕಟ್ಟೆ. ಹಾಗಾಗಿ ಮಣಿನಾಲ್ಕೂರು, ಅಲ್ಲಿಪಾದೆ, ಸರಪಾಡಿ, ಉಳಿ, ಅಜಿಲಮೊಗರು ಹೀಗೆ ಕೆಲವು ಭಾಗದಲ್ಲಿ ಸಂತೆ ಇಲ್ಲದಿರುವುದರಿಂದ ಮಣಿನಾಲ್ಕೂರು ಸಂತೆಯಿಂದ ಸುತ್ತಲಿನ ಹಳ್ಳಿಯ ನಿವಾಸಿಗಳಿಗೆ ಸಂತೆಕಟ್ಟೆಯಿಂದ ಪ್ರಯೋಜನವಾದರೂ. ಸರಿಯಾದ ಮೂಲಭೂತ ಸೌಕರ್ಯದ ವ್ಯವಸ್ಥೆ ಇಲ್ಲದಿರುವುದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ.
