ಬಂಟ್ವಾಳ: ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಭರವಸೆ ಕೋಶ ಹಾಗೂ ವೈಷ್ಣವಿ ಟೈಲರಿಂಗ್ ತರಬೇತಿ ಕೇಂದ್ರ ಸಿದ್ಧಕಟ್ಟೆ ಇವರ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಟೈಲರಿಂಗ್, ಕಸೂತಿ ಹಾಗೂ ಫ್ಯಾಶನ್ ಡಿಸೈನಿಂಗ್ ತರಬೇತಿ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು. ಸಿದ್ದಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜು ಗಣಿತಶಾಸ್ತ್ರ ಉಪನ್ಯಾಸಕಿ ಸುಮಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತರಬೇತಿಯ ಪೂರ್ಣ ಪ್ರಯೋಜನವನ್ನು ಪಡೆದು ಸ್ವಉದ್ಯೋಗಕ್ಕೆ ದಾರಿದೀಪವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು.

ತರಬೇತುದಾರರಾಗಿ ಆಗಮಿಸಿದ ಸಿದ್ಧಕಟ್ಟೆ ವೈಷ್ಣವಿ ಟೈಲರಿಂಗ್ ತರಬೇತಿ ಕೇಂದ್ರದ ಮಾಲಕಿ ಪ್ರೇಮ ಮಾತನಾಡಿ, ವಿದ್ಯಾಭ್ಯಾಸದೊಂದಿಗೆ ವೃತ್ತಿ ಕೌಶಲ್ಯವೂ ಅನಿವಾರ್ಯ. ಶೈಕ್ಷಣಿಕ ಜೀವನದ ನಂತರ ವಿದ್ಯಾರ್ಥಿ ಜೀವನದಲ್ಲಿ ಪಡೆದ ಕಲೆ ಹಾಗೂ ಕೌಶಲ್ಯಗಳು ನಮ್ಮ ಮುಂದಿನ ಜೀವನವನ್ನು ರೂಪಿಸುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಹೆಚ್.ಕೆ. ಮಾತನಾಡಿ ವಿದ್ಯಾರ್ಥಿಗಳಿಗೆ ಎಲ್ಲಾ ಉದ್ಯೋಗಗಳಿಗಿಂತ ಸ್ವಉದ್ಯೋಗ ಶ್ರೇಷ್ಠವಾಗಿದೆ. ವಿದ್ಯಾರ್ಥಿಗಳು ಟೈಲರಿಂಗ್ ಹಾಗೂ ವಸ್ತ್ರ ವಿನ್ಯಾಸದಲ್ಲಿ ಪರಿಣತಿ ಪಡೆದರೆ ತಮ್ಮ ಕುಟುಂಬಕ್ಕೆ ಆಧಾರ ಸ್ತಂಭವಾಗಿ ನಿಲ್ಲಬಹುದು ಎಂದರು.
ಸಹಾಯಕ ಪ್ರಾಧ್ಯಾಪಕಿ ನಸೀಮಾ ಬೇಗಂ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಾದ ಸ್ವಾತಿ ಮತ್ತು ತಂಡದವರು ಪ್ರಾರ್ಥಿಸಿದರು ತೃತೀಯ ಬಿಎ ವಿದ್ಯಾರ್ಥಿನಿಯರಾದ ಹರ್ಷಿತಾ ಸ್ವಾಗತಿಸಿ, ಭವ್ಯ ವಂದಿಸಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಚೈತ್ರ ಕಾರ್ಯಕ್ರಮ ನಿರೂಪಿಸಿದರು.
