ಬೆಂಗಳೂರು: ವಿಕಾಸಸೌಧದ ಆವರಣದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆ ಅನಾವರಣದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆಯಿಂದ ಮಾಡಿಸಿದ ಭಾಷಣಕ್ಕೆ ಸಿಎಂ ಸಿದ್ದರಾಮಯ್ಯ ರಂಪಾಟ ಮಾಡಿದ ಘಟನೆ ನಡೆದಿದೆ . ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ ವಿಧಾನಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ವಿರುದ್ಧ ಮುಖ್ಯಮಂತ್ರಿಗಳು ಕಿಡಿಕಾರಿದ್ದಾರೆ. ಚಕ್ರವರ್ತಿ ಸೂಲಿಬೆಲೆಯನ್ನ ಕೋಮುವಾದಿ ಎಂದು ಅವರು ಜರಿದಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಆರೆಸ್ಸೆಸ್ ಮೂಲದ ವ್ಯಕ್ತಿ ಎಂದು ಕಾರ್ಯಕ್ರಮ ಮುಗಿದ ಬಳಿಕ ಗೊತ್ತಾಯಿತು. ಇಂಥ ಕೋಮುವಾದಿಯಿಂದ ಭಾಷಣ ಮಾಡಿಸುತ್ತಿದ್ದಾರೆಂದು ಮೊದಲೇ ಗೊತ್ತಾಗಿದ್ದರೆ ಅದಕ್ಕೆ ಅವಕಾಶವೇ ಕೊಡುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಂಕರಮೂರ್ತಿಯವರು ದೇಶದ ಕ್ಷಮೆ ಕೋರಬೇಕು ಎಂದು ಉಗ್ರಪ್ಪ ಆಗ್ರಹಿಸಿದ್ದಾರೆ.
ಚಕ್ರವರ್ತಿ ಪ್ರತಿಕ್ರಿಯೆ..!
ಒಬ್ಬ ಮುಖ್ಯಮಂತ್ರಿಯಿಂದ ಇಂಥ ಹೇಳಿಕೆ ಬಂದಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಟೀಕಿಸಿದ್ದಾರೆ. ಗಾಂಧೀಜಿ ಯಾರ ಸ್ವತ್ತೂ ಅಲ್ಲ. ತನ್ನ 11 ನಿಮಿಷಗಳ ಭಾಷಣದಲ್ಲಿ ಎಲ್ಲಿಯಾದರೂ ಗಾಂಧೀಜಿಯನ್ನ ಕೆಟ್ಟದಾಗಿ ಚಿತ್ರಿಸಿದ್ದರೆ ತೋರಿಸಲಿ. ಅದು ಬಿಟ್ಟು ಸಿಎಂ ಇಂಥ ಹೇಳಿಕೆ ನೀಡುವುದು ಅವರ ಘನತೆಗೆ ತಕ್ಕುದಲ್ಲ ಎಂದು ಸೂಲಿಬೆಲೆ ಅಭಿಪ್ರಾಯಪಟ್ಟಿದ್ದಾರೆ.
ನಮೋಬ್ರಿಗೇಡ್ ಪ್ರತಿಕ್ರಿಯೆ:
ಅಕ್ರಮ ಶಸ್ತ್ರಾಸ್ತ್ರ, ದರೋಡೆ, ಕೊಲೆಯತ್ನ ಮುಂತಾದ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತ ರೌಡಿ ‘ಬ್ರಿಗೇಡ್ ಅಜಂ” ಕಳೆದ ಬಾರಿ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಾಗ ಯಾವ ಕಾಂಗ್ರೆಸ್ ನಾಯಕರಿಗೂ “ರೌಡಿಯ, ಕೊಲೆಯತ್ನದ ಪಾತಕಿಯ ವಾಸನೆ ಬರಲೇ ಇಲ್ಲಾ, ಅದು ಅಚಾತುರ್ಯ, ಮಹಾಪರಾಧ ಎನ್ನಿಸಲೇ ಇಲ್ಲ. ಪಾಪ.! ಎಂದು ನಮೋಬ್ರೊಗೇಡ್ ಅಭಿಪ್ರಾಯಿಸಿದೆ.


