ಬಂಟ್ವಾಳ: ನರಿಕೊಂಬು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸಿ ಸ್ಥಳೀಯರು ಪಂಚಾಯತ್ ಅಧ್ಯಕಗಷರಿಗೆ ಮನವಿ ಸಲ್ಲಿಸಿದರು. ಇತ್ತೀಚಿಗಿನ ದಿನಗಳಲ್ಲಿ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರ ಮಲಿನಗೊಳಿಸುವ ಪ್ರವೃತ್ತಿ ಬೆಳೆಯುತ್ತಿದೆಯಲ್ಲದೆ ಪ್ಲಾಸ್ಟಿಕ್ ಪರಿಕರಗಳನ್ನು ಬೇಕಾಬಿಟ್ಟಿಯಾಗಿ ಸುಡುವ ಕೆಟ್ಟ ಚಾಳಿ ಬೆಳೆದುಬಿಟ್ಟಿದೆ. ಪ್ಲಾಸ್ಟಿಕ್ ವಿಷಕಾರಿ ಮತ್ತು ಅಪಾಯಕಾರಿ ಎಂದು ತಿಳಿದರೂ ನರಿಕೊಂಬು ಪಂಚಾಯತ್ ವ್ಯಾಪ್ತಿಯ ಜನತಾಗೃಹ ಮೊದಲಾದೆಡೆ ಪ್ರತೀದಿನ ಸ್ನಾನ ಗೃಹ ಕ್ಕೆ ನೀರು ಬಿಸಿ ಮಾಡಲು ಪ್ಲಾಸ್ಟಿಕ್ ನ್ನೆ ಅವಲಂಬಿಸಲಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಇಲ್ಲಿ ತ್ಯಾಜ್ಯ ವಿಲೇವಾರಿಗೆ ಪಂಚಾಯತ್ ನಿಂದ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಅನಿವಾರ್ಯವಾಗಿ ಪ್ಲಾಸ್ಟಿಕ್ ಸುಡಬೇಕಾಗುತ್ತದೆ ಎಂಬುದು ಇಲ್ಲಿನ ನಾಗರಿಕರ ಅಭಿಪ್ರಾಯವಾಗಿರುವ ಹಿನ್ನಲೆಯಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಗ್ರಾಪಂ ಅಧ್ಯಕ್ಷ ಯಶೋಧರ ಕರ್ಬೆಟ್ಟು ಮುಂದಿನ ಎರಡು ತಿಂಗಳೊಳಗೆ ತ್ಯಾಜ್ಯ ಘಟಕ ಸ್ಥಾಪಿಸುವ ಯೋಜನೆ ಹಾಕಲಾಗಿದ್ದು, ಅದುವರೆಗೆ ತಾತ್ಕಾಲಿಕ ನೆಲೆಯಲ್ಲಿ ಅಂಗನವಾಡಿ ಕೇಂದ್ರದ ಬಳಿ ಅನಗತ್ಯ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಎರಡು ವಾರಕ್ಕೊಮ್ಮೆ ವಿಲೇವಾರಿ ಮಾಡುವುದಾಗಿ ಭರವಸೆ ನೀಡಿದರಲ್ಲದೆ,ಪ್ರತೀ ಮನೆಗೆ ಪೈಪ್ ಕಂಪೋಸ್ಟು ನೀಡಿ ಆ ಮುಖೇನ ಹಸಿ ಕಸ ವಿಲೇವಾರಿ ಮಾಡಲು ಸೂಚಿಸಿದರು. ನಿಯೋಗದಲ್ಲಿ ಸ್ಥಳೀಯ ನಿವಾಸಿಗಳಾದ ಸುರೇಶ್ ಕುಮಾರ್, ಮೋಹನಾಚಾರ್ಯ, ರವಿಚಂದ್ರ, ಪ್ರಸಾದ್ ಪೂಜಾರಿ, ನಳಿನಿ ದಯಾನಂದ, ಕವಿತಾ ಹರೀಶ್, ಜಯಂತಿ ಯಾದವ, ಶುಭ ಶಶಿಧರ, ಹೇಮಾ ವಿಶ್ವನಾಥ ಉಪಸ್ಥಿತರಿದ್ದರು.
