ಮೂಡುಬಿದಿರೆ:ಗ್ರಾಮೀಣ ಭಾಗದ ಬಹುತೇಕ ಪ್ರದೇಶವು ಡೀಮ್ಡ್ ಫಾರೆಸ್ಟ್ ಬರುವುದರಿಂದ ಗ್ರಾಮಸ್ಥರ ದಾಖಲೆಗಳಿಗೆ ತೊಂದರೆಯಾಗುತ್ತಿದೆ. ಜಿಲ್ಲೆಯಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶವು ಡೀಮ್ಡ್ ಅಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಅದನ್ನು ಮರುಪರಿಶೀಲಿಸುವಂತೆ ಅರಣ್ಯ ಇಲಾಖೆಗೆ ಸರ್ಕಾರವು ಸೂಚಿಸಿದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹಾರವಾದಲ್ಲಿ ಗ್ರಾಮದ ಬಡವರು ನಿವೇಶನ, ಅದಕ್ಕೆ ಪೂರಕ ದಾಖಲೆ ಪಡೆಯಲು ನೆರವಾಗುತ್ತದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಗ್ರಾಮ ಪಂಚಾಯಿತಿ ಕಚೇರಿ ಗ್ರಾಮದ ದೇಗುಲ. ಅದು ಗ್ರಾಮದ ಸುಪ್ರೀಂ ಕೋರ್ಟ್ ಇದ್ದಂತೆ. ಜನರು ಸಮಸ್ಯೆಗಳೊಂದಿಗೆ ಪಂಚಾಯಿತಿ ಕಾರ್ಯಾಲಯಗಳಿಗೆ ಬರುವಾಗ ಇಲ್ಲಿನ ಜನಪ್ರತಿನಿಧಿಗಳು, ಸಿಬ್ಬಂದಿಗಳು, ಸಿಬ್ಬಂದಿಗಳು ವಿನಮ್ರವಾಗಿ ಸೇವೆ ನೀಡಬೇಕು. ಸಮಸ್ಯೆ ಪರಿಹಾರಕ್ಕೆ ನ್ಯಾಯ ನೀಡುವಾಗ ಅನ್ಯಾಯವಾಗದಂತೆ ಜನರ ಸೇವೆಯನ್ನು ನಾವು ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ಒಂದು ಕೋಟಿ ಅಧಿಕ ಅನುದಾನವನ್ನು ನೆಲ್ಲಿಕಾರು ಗ್ರಾಪಂನ ವಿವಿಧ ಕಾಮಗಾರಿಗೆ ಬಳಸಿದ್ದೇವೆ.

ದ.ಕ ಜಿಪಂ, ಮಂಗಳೂರು ತಾಪಂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಮತುವರ್ಜಿಯಲ್ಲಿ ಸುಮಾರು 50 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡ ನೆಲ್ಲಿಕಾರು ಗ್ರಾಪಂ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪಂಚಾಯಿತಿ ನೂತನ ಕಟ್ಟಡದ ಮೇಲೆ ಸಭಾಭವನ ನಿರ್ಮಿಸಲು ಹಾಗೂ ಕಾರ್ಯಾಲಯಕ್ಕೆ ಪಿಠೋಪಕರಣ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.
ಜಿಪಂ ಸದಸ್ಯೆ ಸುಜಾತ ಕೆ.ಪಿ ಮಾತನಾಡಿ, ಜಿಪಂ ಅನುದಾನದಲ್ಲಿ ನೆಲ್ಲಿಕಾರು ಗ್ರಾಪಂ ವ್ಯಾಪ್ತಿಗೆ 14 ಲಕ್ಷ ರೂ.ಗಳನ್ನು ಅನುದಾನವನ್ನು ಮೀಸಲಿರಿಸಲಾಗಿದೆ ಎಂದರು.
ತಾಪಂ ಸದಸ್ಯೆ ರೇಖಾ ಸಾಲ್ಯಾನ್, ಮಂಗಳೂರು ತಾಪಂ ಕಾರ್ಯನಿರ್ವಹಣಾಧಿಕಾರಿ ಸದಾನಂದ ಜಿ., ಜಿಪಂ ಮಂಗಳೂರು ವಿಭಾಗದ ಸಹಾಯಕ ಕಾರ್ಯನಿರ್ವಹಣಾ ಅಭಿಯಂತರ ರೋಹಿತ್ದಾಸ್, ಜಿಲ್ಲಾ ಗ್ರಂಥಾಧಿಕಾರಿ ಗಾಯತ್ರಿ, ನೆಲ್ಲಿಕಾರು ಗ್ರಾಪಂ ಪ್ರಥಮ ಅಧ್ಯಕ್ಷ ಯುವರಾಜ ಹೆಗ್ಡೆ ಮುಖ್ಯ ಅತಿಥಿಯಾಗಿದ್ದರು.
ಗ್ರಾಪಂ ಅಧ್ಯಕ್ಷ ಜಯಂತ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಕುಶಲ, ಪಿಡಿಒ ಪ್ರಶಾಂತ್ ಶೆಟ್ಟಿ, ಕಾರ್ಯದರ್ಶಿ ಶೇಖರ್, ನೆಲ್ಲಿಕಾರು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಹರೀಶ್ ಆಚಾರ್ಯ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ನಟರಾಜ ಜೈನ್, ಧನಂಜಯ ಆಳ್ವ, ಇಂಜಿನಿಯರ್ ಜಗದೀಪ್ ಶೆಠೆ, ಅಜಿತ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸದಸ್ಯ ಶಶಿಧರ್ ಎಂ. ಸ್ವಾಗತಿಸಿದರು. ಮಹಾವೀರ ಹೆಗ್ಡೆ ಅವರು ಸಂಸದ ನಳಿನ್ ಕುಮಾರ್ ಅವರ ಸಂದೇಶವನ್ನು ವಾಚಿಸಿದರು. ಪಂಚಾಯಿತಿ ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.
