ಬಂಟ್ವಾಳ: ಕ್ರೀಡೆಯು ವ್ಯಕ್ತಿಯ ಬೆಳವಣಿಗೆಯೊಂದಿಗೆ ದೇಶದ ಪ್ರಗತಿಗೆ ಪೂರಕವಾದುದುದು. ಕ್ರೀಡೆಯಲ್ಲಿ ಹೆಸರು ಗಳಿಸಿದ ಪ್ರತಿಯೊಬ್ಬರೂ ರಾಷ್ಟ್ರದ ಹೆಸರನ್ನು ಹೆಚ್ಚಿಸುತ್ತಾರೆ. ಆ ಮೂಲಕ ಕ್ರೀಡಾ ಕ್ಷೇತ್ರವು ದೇಶದಲ್ಲಿಯೇ ಪ್ರಮುಖ ಕ್ಷೇತ್ರವಾಗಿದೆ ಎಂದು ಧವಳಾ ಕಾಲೇಜು ಮೂಡಬಿದರೆ ಇದರ ಪ್ರಾಂಶುಪಾಲ ಡಾ.ಎಮ್ ರವೀಶ್ ಕುಮಾರ್ ಅವರು ಹೇಳಿದರು. ಅವರು ಬುಧವಾರ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾವಿ ಕಾಲೇಜಿನ ಸ್ನಾತಕೋತ್ತರ, ಪದವಿ ಮತ್ತು ಪದವಿಪೂರ್ವ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು. ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ದೈಹಿಕ ಮತ್ತು ಮಾನಸಿಕ ದೃಢತೆ ಪಡೆಯಲು ಸಾಧ್ಯ. ಕ್ರೀಡಾ ಕ್ಷೇತ್ರದಲ್ಲಿದ್ದವರಿಗೆ ಉದ್ಯೋಗಾವಕಾಶಗಳು ಹೆಚ್ಚು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಪಾಂಡುರಂಗ ನಾಯಕ್ ಮಾತನಾಡಿ, ಪಠ್ಯ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಮುಖ್ಯ. ಅದರಲ್ಲಿ ತೊಡಗಿಸಿಕೊಳ್ಳವ ಮೂಲಕ ತಾವು ವಿಕಸಿಸಬೇಕು ಎಂದರು.ಕಾಲೇಜು ಉಪಪ್ರಾಂಶುಪಾಲೆ ಡಾ.ಹೆಚ್. ಆರ್. ಸುಜಾತ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ. ಅತಿಥಿ ಪರಿಚಯ ಮಾಡಿದರು. ಕ್ರೀಡಾ ನಿರ್ದೇಶಕ ಕ್ಯಾ| ಸುಂದರ ವಂದಿಸಿದರು. ಉಪನ್ಯಾಸಕ ಕಿಟ್ಟು ರಾಮಕಂಜ ಕಾರ್ಯಕ್ರಮ ನಿರೂಪಿಸಿದರು.

