ಬಂಟ್ವಾಳ: ಜಗತ್ತಿನಲ್ಲಿಯೇ ಅತ್ಯುತ್ತಮ ಸಂವಿಧಾನ ನಮ್ಮದು, ಆದರೆ ಇದರ ಆಶಯಕ್ಕೆ ಮುಳುವಾಗುವಂತಹಾ ಯಾವುದೇ ವಿದ್ಯಮಾನ ನಡೆಯಲು ಅವಕಾಶ ನೀಡಬಾರದು, ಅದಕ್ಕೆ ಅವಕಾಶ ಕೊಟ್ಟರೆ ಅದು ನಮ್ಮ ದೇಶಕ್ಕೆ ಮಾಡುವ ದೊಡ್ಡ ಅಪಮಾನ ಎಂದು ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದರು.
ಎನ್ ಸಿ ಹೆಚ್ ಆರ್ ಓ ನ ಬಂಟ್ವಾಳ ತಾಲೂಕು ಘಟಕ ಶುಕ್ರವಾರ ಸಂಜೆ ಬಿ.ಸಿ.ರೋಡಿನಲ್ಲಿ ಆಯೋಜಿಸಲಾದ ಎನ್ ಆರ್ ಸಿ, ಸಿಎಎ ಹಾಗೂ ಎನ್ ಪಿ ಆರ್ ವಿಷಯದ ಕುರಿತಾದ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಎನ್ ಪಿಆರ್ ಗೂ ಎನ್ ಆರ್ ಸಿ ಗೂ ಸಂಬಂಧ ಇಲ್ಲ ಅಂತ ಹೇಳುತ್ತಿದ್ದಾರೆ, ಇದು ಕೋಳಿಗೂ, ಕೋಳಿಮೊಟ್ಟೆಗೂ ಸಂಬಂಧ ಇಲ್ಲ ಎನ್ನುವಂತಿದೆ. ಇಂತಹಾ ಸುಳ್ಳುಗಳಿಗೆ ಮರುಳಾಗಬೇಡಿ ಎಂದವರು ಕರೆ ನೀಡಿದರು. ದಕ್ಷಿನಕನ್ನಡ ನನ್ನ ಜಿಲ್ಲೆ ಇಲ್ಲಿನ ಜನರೊಂದಿಗೆ ಮಾತನಾಡುವುದೆಂದರೆ ನನಗೆ ಖುಷಿಯ ಸಂಗತಿ ಎಂದ ಅವರು, ಅಂಬೇಡ್ಕರ್ ಕೊಟ್ಟ ಸಂವಿಧಾನದ ಆಶಯದ ಉಳಿವಿಗೆ ಗಾಂಧಿ ಮಾರ್ಗದಲ್ಲಿ ಸಾಗುವ, ಹೇಡಿಯಾಗಬೇಡಿ ಆದರೆ ಹೊಡೆದಾಟ ಬೇಡ. ಶಾಂತಿಯಿಂದ ಸೌಹಾರ್ದತೆಯಿಂದ ಗುರಿ ತಲುಪಿ, ಭಾರತ ಅಂದರೆ ಏನೆಂದು ತೋರಿಸೋಣ ಎಂದರು. ಎನ್ ಸಿಎಚ್ ಆರ್ ಓ ರಾಜ್ಯ ಉಪಾಧ್ಯಕ್ಷ ಮಹಮ್ಮದ್ ಕಕ್ಕಿಂಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಅಶ್ರಫ್ ಹಕ್ಲಾಡಿ, ತೌಫೀದ್ ಕಲ್ಲಡ್ಕ, ಅಬ್ದುಲ್ ಸಲೀಂ, ಮಹಮ್ಮದ್ ಶಫಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಪಿಎ.ರಹೀಂ , ನಿಖಿತ್ ರಾಜ್ ಮೌರ್ಯ ವೇದಿಕೆಯಲ್ಲಿದ್ದರು. ನ್ಯಾಯವಾದಿ ಮಹಮ್ಮದ್ ಕಬೀರ್ ಸ್ವಾಗತಿಸಿದರು. ಅಕ್ಬರ್ ಅಲಿ ಪೊನ್ನೋಡಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

