ಬಂಟ್ವಾಳ:ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕಿನ ಎಲಿಯನಡುಗೋಡು ಮತ್ತು ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ‘ವೀರ-ವಿಕ್ರಮ’ ಜೋಡುಕರೆ ಬಯಲು ಕಂಬಳ ಇದೇ 7ರಂದು ಶನಿವಾರ ನಡೆಯಲಿದ್ದು, ಸುಸಜ್ಜಿತ ಕರೆ ಸಹಿತ ವಿಶಾಲವಾದ ವೇದಿಕೆ ಮತ್ತು ಗ್ಯಾಲರಿ ಸಿದ್ಧಗೊಂಡಿದೆ.
ಇಲ್ಲಿನ ಶ್ರೀ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ನಡೆಯುವ ಈ ಕಂಬಳ ಕೂಟದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಸಹಿತ ಹಲವಾರು ಮಂದಿ ಸಚಿವರು ಮತ್ತಿತರ ಗಣ್ಯರ ದಂಡು ಭಾಗವಹಿಸುವ ನಿರೀಕ್ಷೆ ಇದೆ.

6btl-Kambala
ಉದ್ಘಾಟನೆ:
ಶನಿವಾರ (ಡಿ.7ರಂದು) ಬೆಳಿಗ್ಗೆ 8 ಗಂಟೆಗೆ ಪೂಂಜ ಕ್ಷೇತ್ರದ ಅಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಕಂಬಳ ಉದ್ಘಾಟಿಸಲಿದ್ದು, ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮೂಡುಬಿದ್ರೆ ಚೌಟರ ಅರಮನೆ ಕುಲದೀಪ್ ಎಂ., ಪೂಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕೇಶ ಶೆಟ್ಟಿ ಮೊಯಿಲೊಟ್ಟು, ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು, ಎಪಿಎಂಸಿ ಮಾಜಿ ಸದಸ್ಯ ರತ್ನಕುಮಾರ್ ಚೌಟ, ಉದ್ಯಮಿ ಜಗತ್ಪಾಲ ಚೌಟ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಸುಮಾರು 125ಕ್ಕೂ ಮಿಕ್ಕಿ ಜೋಡಿ ಕೋಣಗಳು ಕಂಬಳ ಕರೆಗೆ ಇಳಿಯಲಿದೆ.

6btl-Rashmith Shetty
ಗಣ್ಯರ ದಂಡು:
ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅಧ್ಯಕ್ಷತೆಯಲ್ಲಿ ಸಂಜೆ ನಡೆಯುವ ಸಭಾ ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸುವರು. ರಾಜ್ಯದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭೆ ಮುಖ್ಯ ಸಚೇತಕ ವಿ.ಸುನಿಲ್ ಕುಮಾರ್, ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ತೇಜಸ್ವಿ ಸೂರ್ಯ, ಶಾಸಕ ಹರೀಶ ಪೂಂಜ, ಬಿಜೆಪಿ ರಾಜ್ಯ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ಹಾಸನ ಶಾಸಕ ಪ್ರೀತಂ ಗೌಡ, ಪ್ರೊ.ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ, ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಮಾಜಿ ಶಾಸಕರು ಭಾಗವಹಿಸುವರು. ಆರಂಬೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಹುಲಿಮೇರು, ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ದಿನೇಶ ಸುಂದರ ಶಾಂತಿ, ರಾಯಿ ಗ್ರಾ.ಪಂ.ಅಧ್ಯಕ್ಷ ಬಿ.ದಯಾನಂದ ಸಪಲ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೋಪಾಲಕೃಷ್ಣ ಚೌಟ ಮತ್ತಿತರ ಗಣ್ಯರು ಬಹುಮಾನ ವಿತರಿಸುವರು ಎಂದು ಕಂಬಳ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ತಿಳಿಸಿದ್ದಾರೆ.

4mjrKAMBALA(2)
ವಿಶೇಷತೆ:
ಇಲ್ಲಿನ ಕಾರಣಿಕ ಪ್ರಸಿದ್ಧ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಮುಜಿಲ್ನಾಯ ದೈವಸ್ಥಾನದೊಂದಿಗೆ ವಿಶೇಷ ‘ಧಾರ್ಮಿಕ ನಂಟು’ ಹೊಂದಿರುವ ಹೊಕ್ಕಾಡಿಗೋಳಿ ಕಂಬಳಕ್ಕೆ ನೂರು ವರ್ಷಗಳ ಇತಿಹಾಸವೂ ಇದೆ. ಇದರಿಂದಾಗಿ ಸಾಂಪ್ರದಾಯಿಕ ಕಂಬಳವೆಂದು ಗುರುತಿಸಿಕೊಂಡಿದೆ. ಪ್ರತೀ ವರ್ಷ ಕಂಬಳಕ್ಕೆ ಒಂದು ದಿನ ಮೊದಲು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಹಿಂದೆ ಕೃಷಿಕರು ಕಂಬಳ ಕರೆಗೆ ಏತ ನೀರಾವರಿ ಮೂಲಕ ನೀರು ಹಾಯಿಸುತ್ತಿದ್ದು, ಗ್ಯಾಸ್ ಲೈಟ್ ಬೆಳಕಿನಲ್ಲಿ ‘ಒಂಟಿ ಕರೆ’ ಕಂಬಳ ನಡೆಸುತ್ತಿದ್ದರು. ಅಂದು ವಿಜೇತ ಕೋಣಗಳ ಮಾಲೀಕರಿಗೆ ಬಾಳೆಗೊನೆ, ಸೀಯಾಳ ಮತ್ತಿತರ ಕೃಷಿ ಉತ್ಪನ್ನಗಳನ್ನು ಬಹುಮಾನ ರೂಪದಲ್ಲಿ ನೀಡುವ ಪದ್ಧತಿ ಇತ್ತು ಎನ್ನುತ್ತಾರೆ ಇಲ್ಲಿನ ಹಿರಿಯರು.
ಈ ಹಿಂದೆ ಸ್ಥಳೀಯ ಕೃಷಿಕರಾದ ಪದ್ಮ ಪೂಜಾರಿ, ಸೀತಾರಾಮ ಶೆಟ್ಟಿ, ಜಗತ್ಪಾಲ ಶೆಟ್ಟಿ ಉಮನೊಟ್ಟು, ಸಂಜೀವ ಶೆಟ್ಟಿ ಕಲಾಯಿದಡ್ಡ, ಸಂಜೀವ ಶೆಟ್ಟಿ ಪೊಡುಂಬ ಮತ್ತಿತರರು ಕಂಬಳದ ನೇತೃತ್ವ ವಹಿಸಿ ಮುನ್ನಡೆಸಿದ್ದರು. ಆ ಬಳಿಕ ಸ್ಥಗಿತಗೊಂಡಿದ್ದ ಕಂಬಳಕ್ಕೆ ಅಂದಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿವಂಗತ ಕೆ.ಸಂತೋಷ್ ಕುಮಾರ್ ಭಂಡಾರಿ ಹೊಸ ರೂಪ ನೀಡಿದ್ದರು. ಇವರ ನಂತರ ಸ್ಥಳೀಯ ವಕೀಲ ಸುರೇಶ ಶೆಟ್ಟಿ ಅಧ್ಯಕ್ಷರಾಗಿ ಕಂಬಳ ಮುನ್ನಡೆಸಿದ್ದು, ಕಳೆದ ಮೂರು ವರ್ಷಗಳಿಂದ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಇವರು ಕಂಬಳದ ನೇತೃತ್ವ ವಹಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಸ್ಥಳದಾನಿಗಳು:
ಪ್ರತೀ ವರ್ಷ ಇಲ್ಲಿನ ಪ್ರಗತಿಪರ ಕೃಷಿಕರಾದ ರಾಜು ಗುಮ್ಮಣ್ಣ ಶೆಟ್ಟಿ ಸಹೋದರರು, ಸುಧೀರ್ ಶೆಟ್ಟಿ, ಸುಧಾಕರ ಚೌಟ, ಪ್ರವೀಣ ಕುಲಾಲ್ ಸಹೋದರರು ಮತ್ತು ಹರೀಶ ಶೆಟ್ಟಿ ಸಹೋದರು ಕಂಬಳದ ಅವಧಿಯಲ್ಲಿ ತನ್ನ ಗದ್ದೆಯನ್ನು ಸಂತಸದಿಂದಲೇ ಕಂಬಳಕ್ಕೆ ಬಿಟ್ಟು ಕೊಡುತ್ತಾರೆ.
ಯಶಸ್ವಿಗೆ ಪದಾಧಿಕಾರಿಗಳ ಪಣ:
ಕಂಬಳ ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಗೌರವ ಸಲಹೆಗಾರರಾದ ವಕೀಲ ಸುರೇಶ ಶೆಟ್ಟಿ, ಬಾಬು ರಾಜೇಂದ್ರ ಶೆಟ್ಟಿ, ಕಿರಣ್ ಕುಮಾರ್ ಮಂಜಿಲ, ಪ್ರಧಾನ ಕಾರ್ಯದರ್ಶಿ ಸಂದೇಶ ಶೆಟ್ಟಿ ಪೊಡುಂಬ, ಕೋಶಾಧಿಕಾರಿ ಎಚ್.ಹರೀಶ ಹಿಂಗಾಣಿ, ಕಾರ್ಯದರ್ಶಿ ಪುಷ್ಪರಾಜ್ ಜೈನ್ ನಡ್ಯೋಡಿ, ಸಂಘಟನಾ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಸಂಚಾಲಕರಾದ ರಾಜೇಶ ಶೆಟ್ಟಿ ಕೊನೆರೊಟ್ಟು, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಜನಾರ್ದನ ಬಂಗೇರ ತಿಮರಡ್ಕ, ಪ್ರಭಾಕರ ಎಚ್.ಹುಲಿಮೇರು, ನಿತ್ಯಾನಂದ ಪೂಜಾರಿ ಕೆಂತಲೆ ಸಹಿತ ವಿವಿಧ ಉಪ ಸಮಿತಿ ಪದಾಧಿಕಾರಿಗಳು ಕಂಬಳದ ಯಶಸ್ವಿಗೆ ಹಗಲಿರುಳು ಶ್ರಮ ವಹಿಸುತ್ತಿರುವುದು ಕಂಡು ಬಂದಿದೆ. -ಮೋಹನ್ ಕೆ.ಶ್ರೀಯಾನ್ ರಾಯಿ

By suddi9

Leave a Reply

Your email address will not be published. Required fields are marked *