ವಾಮಂಜೂರು : ಮಂಗಳೂರು ಮಹಾನಗರ ಪಾಲಿಕೆಗೆ ನ. 12ರಂದು ನಡೆಯಲಿರುವ ಚುನಾವಣೆಯಲ್ಲಿ 20ನೇ ತಿರುವೈಲು ವಾರ್ಡಿನಿಂದ ಬಿಜೆಪಿ ಅಭ್ಯರ್ಥಿ, ಮಾಜಿ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್ ಪರವಾಗಿ ಪ್ರಚಾರದ ಅಂತಿಮ ದಿನವಾದ ನ. 12ರಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಹಾಗೂ ಹಿಂದೂ ಮುಖಂಡ ಜಗದೀಶ ಶೇಣವ ವಾಮಂಜೂರು ಜಂಕ್ಷನಿನಲ್ಲಿ ಅಂಗಡಿಗಳು ಮತ್ತು ಮನೆಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದರು.
ಮನೆಯೊಂದರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹರಿಕೃಷ್ಣ, “ಈ ಬಾರಿ ಬಿಜೆಪಿ ಮನಪಾದಲ್ಲಿ ಅಧಿಕಾರ ಹಿಡಿಯಲಿದೆ. ಹಿಂದಿನ ಆಡಳಿತ ಪಕ್ಷವಾದ ಕಾಂಗ್ರೆಸ್ ಕಾರ್ಯವೈಖರಿ ಬಗ್ಗೆ ಜನರು ಬೇಸತ್ತು ಹೋಗಿದ್ದಾರೆ. ಬಿಜೆಪಿ ಸರ್ವಧರ್ಮದ ಜನರ ಅಭಿವೃದ್ಧಿ ಬಯಸಿದ್ದು, ಸ್ಥಳೀಯಾಡಳಿತ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಹೆಚ್ಚಿನ ಅಭಿವೃದ್ಧಿ ಬಯಸಿದೆ. ಈ ವಾರ್ಡಿನಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ಅಭ್ಯರ್ಥಿ ಹೇಮಲತಾ ನಡೆಸಿರುವ ಕೆಲಸಗಳ ಮೂಲಕ ಮತ್ತೊಂದು ಅವಧಿಗೆ ಗೆದ್ದು ಬರುವಂತೆ ವಾರ್ಡ್ ಮತದಾರರು ಸಹಕರಿಸಬೇಕು” ಎಂದರು.
ಹರಿಕೃಷ್ಣ ಬಂಟ್ವಾಳ ಜೊತೆಯಲ್ಲಿ ಹೇಮಲತಾ ಆರ್ ಸಾಲ್ಯಾನ್, ಬಿಜೆಪಿ ಕಾರ್ಯಕರ್ತರಾದ ಸನತ್ ಕುಮಾರ್ ರೈ ಪಡು, ಗೋಕುಲದಾಸ್ ಶೆಟ್ಟಿ ಪಡುಪಳ್ಳಿ, ಅರ್ವಿನ್, ಕಿಶೋರ್ ವಾಸ್, ಓಂ ಪ್ರಕಾಶ್ ಶೆಟ್ಟಿ ವಾಮಂಜೂರು, ಕೃಷಿಕ ರಮಾನಾಥ ಅತ್ತರ್(ಚಿತ್ತಣ್ಣ) ಮೂಡುಶೆಡ್ಡೆ, ಅನಿಲ್ ರೈ, ಕಿರಣ್ ಪಕ್ಕಳ, ಚಾಲ್ರ್ಸ್, ವೆಂಕಟೇಶ ಬಾಳಿಗ, ಉದ್ಯಮಿ ರಘು ಸಾಲ್ಯಾನ್ ಮತ್ತಿತರರು ಇದ್ದರು.
ಬಾಕ್ಸ್ : ಮಿಲಾದುನ್ನಬಿ : ಹರಿಕೃಷ್ಣ ಬಂಟ್ವಾಳ ಮನೆಮನೆ ಪ್ರಚಾರದ ವೇಳೆ ಹರಿಕೃಷ್ಣ ಬಂಟ್ವಾಳ, ಹೇಮಲತಾ ಸಾಲ್ಯಾನ್, ಜಗದೀಶ ಶೇಣವ, ರಾಜೇಶ್ ಸುವರ್ಣ ಗುರುಪುರ ಹಾಗೂ ಇತರ ಬಿಜೆಪಿ ಮುಖಂಡರು ವಾಮಂಜೂರು ಜಂಕ್ಷನಿನಲ್ಲಿ ಮಿಲಾದುನ್ನಬಿ ಮೆರವಣಿಗೆ ಮೂಲಕ ಸಾಗಿ ಬಂದ ಮಕ್ಕಳು ಹಾಗೂ ಮುಸ್ಲಿಂ ನಾಯಕರೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿದರು.




