ಬಂಟ್ವಾಳ:ಅಯೋಧ್ಯಾ ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ ಒಟ್ಟು ೫ ಕೆಎಸ್‌ಆರ್‌ಪಿ ನಿಯೋಜಿಸಲಾಗಿದೆ ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದರು.

ಎಸ್ಪಿ ಲಕ್ಷ್ಮೀಪ್ರಸಾದ್

ಬಿ.ಸಿ.ರೋಡಿನ ಎಎಸ್ಪಿ ಕಚೇರಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿ ಅವರು, ಪೊಲೀಸರು ರಾತ್ರಿ, ಹಗಲು ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಮಾಜ ಘಾತಕ ಶಕ್ತಿಗಳನ್ನು ಗುರುತಿಸಲಾಗಿದ್ದು, ಅವರ  ಮೇಲೆ ನಿಗಾ ಇರಿಸಲಾಗಿದೆ. ಯಾರೇ ಶಾಂತಿ ಕದಡಲು ಯತ್ನಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುತ್ತದೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳ ಕುರಿತು ಕೂಡ ನಿಗಾ ಇರಿಸಲಾಗಿದ್ದು, ಬಂಟ್ವಾಳ ಉಪವಿಭಾಗ ವ್ಯಾಪ್ತಿಯಲ್ಲಿ ತಾನು, ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿ ಹೆಚ್ಚುವರಿ ಎಸ್ಪಿಯವರು ಭದ್ರತಾ ಕಾರ್ಯದ ಕುರಿತು ನೇತೃತ್ವ ವಹಿಸಲಿದ್ದಾರೆ ಎಂದು ವಿವರಿಸಿದರು.
೮ ಚೆಕ್ ಪೋಸ್ಟ್‌ಗಳು:
ಬಂಟ್ವಾಳ ವೃತ್ತದ ಸಂಪೂರ್ಣ ಜವಬ್ದಾರಿಯನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರಿಗೆ ವಹಿಸಲಾಗಿದ್ದು, ರಾತ್ರಿ ಹಗಲು ಕಾರ್ಯಚರಿಸಲು ೨೨ ಸೆಕ್ಟರ್‌ಗಳನ್ನು ಒಳಗೊಂಡಂತೆ ೩೦೦ ಪೋಲೀಸರು ನಿಯೋಜಿಸಲಾಗಿದೆ. ಗಡಿಭಾಗದಲ್ಲಿ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ೮ ಚೆಕ್ ಪೋಸ್ಟ್‌ಗಳನ್ನು ಮಾಡಲಾಗಿದ್ದು, ಜೊತೆಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಆ ಮೂಲಕ ವಿಶೇಷ ಕಣ್ಗಾವಲು ಇಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಂಶಯಾಸ್ಪದ ವ್ಯಕ್ತಿಗಳ ಮತ್ತು ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ. ಶಾಂತಿ ಕಾಪಾಡುವ ಸಲುವಾಗಿ ಎಲ್ಲಾ ಸಮಾಜದ ಪ್ರಮುಖರನ್ನು ಕರೆದು ಸಮಾಲೋಚನೆ ನಡೆಸಲಾಗಿದೆ. ಅತೀ ಸೂಕ್ಷ್ಮ ಪ್ರದೇಶಗಳಾದ ಬಂಟ್ವಾಳ, ಕೈಕಂಬ, ಫರಂಗಿಪೇಟೆ, ಸಾಲೆತ್ತೂರು, ಕನ್ಯಾನ, ಅಡ್ಯನಡ್ಕ, ವಿಟ್ಲ, ಕಬಕ ಆಸುಪಾಸಿನಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಎಎಸ್ಪಿ ಸೈದುಲು ಅಡಾವತ್ ಜೊತೆಗಿದ್ದರು.

By suddi9

Leave a Reply

Your email address will not be published. Required fields are marked *