ಕೈಕಂಬ : ಶಾಲಾ ಮಟ್ಟದಲ್ಲಿ ಆರೋಗ್ಯದ ಕುರಿತು ಇಂತಹ ಕಾರ್ಯಕ್ರಮ ಆಯೋಜಿಸುವ ಅಗತ್ಯವಿದೆ. ಇದು ಸಾಮಾಜಿಕ ಜವಾಬ್ದಾರಿಯಾಗಿದೆ. ಆಹಾರ ಪದ್ಧತಿ, ಪರಿಸರ ಮತ್ತು ಸ್ವಚ್ಛತೆ ಬಗ್ಗೆ ಗಮನಹರಿಸಿದರೆ ಬಹುತೇಕ ಎಲ್ಲ ಕಾಯಿಲೆ ತಡೆಗಟ್ಟಲು ಸಾಧ್ಯವಿದೆ ಎಂದು ಶಾಸಕ ಮಾಜಿ ಸಚಿವ ಯು ಟಿ ಖಾದರ್ ಹೇಳಿದರು.
ಅವರು ಆಯುರ್ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್(ರಿ), ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ಗಂನಜಿಮಠ ಹಾಗೂ ಮಂಗಳೂರು ಕೆಎಂಸಿ ಆಸ್ಪತ್ರೆ ಮತ್ತು ರಾಜ್ ಅಕಾಡೆಮಿ ಗಂಜಿಮಠ ಇದರ ಸಂಯುಕ್ತಾಶ್ರಯದಲ್ಲಿ ಮಧುಮೇಹ ಜಾಗೃತಿ ಅಂಗವಾಗಿ ಶುಕ್ರವಾರ ಗಂಜಿಮಠದ ರಾಜ್ ಅಕಾಡೆಮಿ ಶಾಲೆಯಲ್ಲಿ `ಆಯುರ್ ಸ್ಪರ್ಶ ಮಧುಮೇಹ ಮುಕ್ತ ಭಾರತ ಜನಜಾಗೃತಿ ಅಭಿಮಾನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂಗಳೂರು ಕೆಎಂಸಿ ಆಸ್ಪತ್ರೆಯ ಎಂಡೋಕ್ರಿನೋಲಾಜಿಸ್ಟ್ ಡಾ. ಶ್ರೀನಾಥ್ ಶೆಟ್ಟಿ ಪ್ರಾತ್ಯಕ್ಷಿಕೆಯೊಂದಿಗೆ ಮಧುಮೇಹದ ಬಗ್ಗೆ ಮಾಹಿತಿ ನೀಡುತ್ತ, ಶುಗರ್ ಕಂಟ್ರೋಲ್ ಮಾಡದಿದ್ದಲ್ಲಿ ಹೃದಯ, ಕಣ್ಣು, ಕಿಡ್ನಿ ಮೊದಲಾದ ಅಂಗಾಂಗಗಳಲ್ಲಿ ರೋಗಗಳಿಗೆ ಅವಕಾಶ ನೀಡಿದಂತಾಗುತ್ತದೆ. 2050ರ ಹೊತ್ತಿಗೆ ಭಾರತವು ಮಧುಮೇಹ ರಾಜಧಾನಿಯಾಗುವ ಸಾಧ್ಯತೆ ಇದೆ. ಈಗ ಚೀನಾ ನಂಬರ್ ಒನ್ ಸ್ಥಾನದಲ್ಲಿದೆ. ದೇಹದಲ್ಲಿ ಇನ್ಸುಲಿನ್ ಕೆಲಸ ಮಾಡುವುದಿಲ್ಲ ಎಂದಾದರೆ ಅದು `ಟೈಪ್-ಟೂ’ ಮಧುಮೇಹ, ಇನ್ಸುಲಿನ್ ಇಲ್ಲದಿದ್ದರೆ ಅದು `ಟೈಪ್-ಒನ್’ ಮಧುಮೇಹವಾಗಿರುತ್ತದೆ. ವ್ಯಾಯಾಮದಿಂದ ಮಧುಮೇಹ ನಿಯಂತ್ರಿಸಬಹುದು ಎಂದರು.
ಆಯುರ್ ಸ್ಪರ್ಶ ಫೌಂಡೇಶನ್ ಅಧ್ಯಕ್ಷ ಡಾ. ಸತೀಶ್ ಶಂಕರ್ ಟೈಪ್-ಒನ್, ಟೈಪ್-ಟೂ ಮಧುಮೇಹದ ಬಗ್ಗೆ ಮಾಹಿತಿ ನೀಡುತ್ತ, ಜನಜಾಗೃತಿಯಿಂದ ಮಧುಮೇಹ ತಡೆಗಟ್ಟಬಹುದು. ಶೇ 50ರಷ್ಟು ಮಧುಮೇಹ ತಡೆಗಟ್ಟಲು ಸಾಧ್ಯವಿರುವಂತಹದ್ದಾಗಿದೆ. ಜೀವನ ಶೈಲಿ, ಆಹಾರ ಪದ್ಧತಿ ಬದಲಿಸಿಕೊಂಡು, ಜೀವನದಲ್ಲಿ ಪ್ರತಿಯೊಬ್ಬರೂ ವ್ಯಾಯಾಮಕ್ಕೆ ಮಹತ್ವ ನೀಡಬೇಕು ಎಂದರು.
ಮಂಗಳೂರು ಕೆಎಂಸಿ ಆಸ್ಪತ್ರೆಯ ಡಾ. ವಿಷು ಕುಮಾರ್ ಮಧುಮೇಹ ಮತ್ತು ಹೃದ್ರೋಗ ಕುರಿತು ಮಾಹಿತಿ ನೀಡಿದರು. ರಾಜ್ ಅಕಾಡೆಮಿ ಸಂಚಾಲಕಿ ಮಮತಾ ಶೆಟ್ಟಿ ಮಾತನಾಡಿ, ಈಗ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯ ಕಂಡು ಬಂದಿದೆ ಎಂದರು.
ಕಾಂಗ್ರೆಸ್ ವಕ್ತಾರ ಗಣೇಶ್ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಧುಮೇಹ ಗಂಭೀರ ಕಾಯಿಲೆ. ಶಾಲೆಗಳಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಹರಿಸಬೇಕು ಎಂದರು.ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಕಾಲೇಜು ಮಟ್ಟದಲ್ಲಿ ಆಯೋಜಿಸಲಾಗಿದ್ದ ಮಧುಮೇಹ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಪ್ರವೀಣಾ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಆಶ್ರಿತಾ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಶ್ವೇತಾ ವಂದಿಸಿದರು.
ಬಳಿಕ ವೈದ್ಯರೊಂದಿಗೆ ಸಂವಾದ, ರಾಜ್ ಅಕಾಡೆಮಿ ಮತ್ತು ಮೂಡುಶೆಡ್ಡೆ ಶುಭೋದಯ ಶಾಲಾ ಮಕ್ಕಳಿಂದ ಮಧುಮೇಹ ಜಾಗೃತಿ ಕಿರು ನಾಟಕ ಪ್ರದರ್ಶನಗೊಂಡಿತು. ಶಾಲೆಯಲ್ಲಿ ಆಯೋಜಿಸಲಾದ ಉಚಿತ ಮಧುಮೇಹ ಮತ್ತು ಹೃದಯ ತಪಾಸಣಾ ಶಿಬಿರದಿಂದ ನೂರಾರು ಮಕ್ಕಳು, ಸಾರ್ವಜನಿಕರು ಪ್ರಯೋಜನ ಪಡೆದರು.






