ಕೋಲಾರ: ಬೆಂಗಳೂರಿನ ಹೆವೋಟ್ ಪಾಕರ್ಡ್ ಎಂಟರ್ಪ್ರೈಸಸ್ ಕಂಪನಿಯ ಸಿಎಸ್ಆರ್ ಗ್ರೂಪ್ನ ಸಿಬ್ಬಂದಿ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆವರಣ ಸ್ವಚ್ಚತೆ ಮಾಡಿ, ಗೋಡೆಗಳಿಗೆ ಅವರೇ ಸುಣ್ಣ,ಬಣ್ಣ ಬಳಿದರಲ್ಲದೇ ಮಕ್ಕಳಿಗೆ ನೋಟ್ಪುಸ್ತಕ ಮತ್ತು ಲೇಖನ ಸಾಮಗ್ರಿ ವಿತರಿಸಿದರು. ಯಾವುದೇ ಪ್ರಚಾರ ಬಯಸದ ಈ ಸಿಬ್ಬಂದಿ ರಾಜ್ಯದ ಹಲವಾರು ಕಡೆಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಶ್ರಮಿಸುತ್ತಿದ್ದು, ಅದರ ಭಾಗವಾಗಿ ಕೋಲಾರದ ಮೈನ್ ಉರ್ದು ಶಾಲೆಗೆ ಆಗಮಿಸಿ ಅಲ್ಲಿನ ಆವರಣವನ್ನು ಸ್ವಚ್ಚಗೊಳಿಸಿದರಲ್ಲದೇ ಗೋಡೆಗಳಿಗೆ ಅವರೇ ಸುಣ್ಣ,ಬಣ್ಣ ಬಳಿಯುವ ಮೂಲಕ ನವೀಕರಿಸಿದರು

ಕಳೆದ ಐದು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಈ ಸಿಬ್ಬಂದಿ ಇದೀಗ ಕೋಲಾರ ಜಿಲ್ಲೆಯ ಶಾಲೆಗಳ ನವೀಕರಣಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬಿಇಒ ಕೆ.ಎಸ್.ನಾಗರಾಜಗೌಡ, ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಉಳ್ಳವರ ನೆರವು ಅಗತ್ಯವಿದೆ, ಸರ್ಕಾರದ ಜತೆಗೆ ಇತರೆ ಕಂಪನಿಗಳು ಕೈಜೋಡಿಸಬೇಕು, ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಈ ಕಂಪನಿಯ ಅಧಿಕಾರಿ ನೌಕರರು ತಾವೇ ಸ್ವತಃ ಶಾಲಾ ಕಟ್ಟಡಕ್ಕೆ ಸುಣ್ಣಬಣ್ಣ ಬಳಿಯುವ ಕಾರ್ಯದಲ್ಲಿ ತೊಡಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಅನಿಲ್ಕುಮಾರ್, ಇಸಿಒ ಆರ್ ಶ್ರೀನಿವಾಸನ್, ಸ್ಕೌಟ್ಬಾಬು, ಇಸಿಒ ಸಿರಾಜುದ್ದೀನ್ ಮತ್ತಿತರರು ಹಾಜರಿದ್ದರು. ಕೋಲಾರದ ಉರ್ದು ಶಾಲೆಗೆ ಸುಣ್ಣಬಣ್ಣ ಬಳಿಯುತ್ತಿರುವ ಬೆಂಗಳೂರಿನ ಹೆವೋಟ್ ಪಾಕರ್ಡ್ ಎಂಟರ್ಪ್ರೈಸಸ್ ಕಂಪನಿಯ ಸಿಎಸ್ಆರ್ ಗ್ರೂಪ್ನ ಸಿಬ್ಬಂದಿಗೆ ಬಿಇಒ ನಾಗರಾಜಗೌಡ ಸಾಥ್ ನೀಡಿದರು.`
