ಅಜೆಕಾರು: ಮಕ್ಕಳ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗುರುತಿಸಿ ಪ್ರೋತ್ಸಾಹಿಸ ಬೇಕು, ಶಿಶು ಗೀತೆಗಳನ್ನು, ಜಾನಪದ ಗೀತೆಗಳನ್ನು ಕಲಿಸಿ ಅವರಲ್ಲಿ ಉತ್ಸಾಹ ತುಂಬ ಬೇಕು ಎಂದು ಹಿರಿಯ ಕವಿ ಕಾಂತಾವರ ಶಿವಾನಂದ ಶೆಣೈ ಹೇಳಿದರು. ಅವರು ಅಜೆಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ “ತಿಂಗಳ ಸಂಭ್ರಮ” 5 ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಶಿಶು ಗೀತೆಗಳು ಮತ್ತು ಆಶು ಕವಿತೆಗಳನ್ನು ಹಾಡಿ ಬದುಕನ್ನು ಹೇಗೆ ನಡೆಸ ಬೇಕು ಎಂಬುದನ್ನು ಹೆತ್ತವರಿಗೆ ಮತ್ತು ಮಕ್ಕಳಿಗೆ ಮನವರಿಕೆ ಮಾಡಿ, ತಮ್ಮ ಕವಿತೆಗಳನ್ನು ಮಕ್ಕಳಿಗೆ ಉಚಿತವಾಗಿ ವಿತರಿಸಿದರು. ಭರತನಾಟ್ಯದಲ್ಲಿ ಬಾಲ್ಯದಲ್ಲಿಯೇ ಸಾಧನೆ ಮಾಡಿರುವ ಮೂಡುಬಿದಿರೆಯ ಬಾಲಕಿ ಕರ್ನಾಟಕ ಪ್ರತಿಭಾ ರತ್ನ ಗೌರವ ಪುರಸ್ಕ್ರತೆ ಪ್ರಕೃತಿ ಮಾರೂರು ನೃತ್ಯ ಪ್ರದರ್ಶನ ನೀಡಿದರು.

ಪ್ರಕೃತಿ ಮತ್ತು ಶಿವಾನಂದ ಶೆಣೈ ಅವರನ್ನು ಗೌರವಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ವಿಶ್ವನಾಥ ಅವರು ಅಧ್ಯಕ್ಷತೆ ವಹಿಸಿದ್ದರು. ತಿಂಗಳ ಸಂಭ್ರಮದ ನಿರ್ದೇಶಕ ಡಾ. ಶೇಖರ ಅಜೆಕಾರು ಸ್ವಾಗತಿಸಿ, ಪ್ರಾಸ್ತವಿಕವಾಗಿ
ಮಾತನಾಡಿದರು. ವಿದ್ಯಾರ್ಥಿನಿ ನಫಿಸಾ ವಂದಿಸಿದರು. ಹಿರಿಯ ಶಿಕ್ಷಕಿ ಶಾರದ ನಿರೂಪಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಸದಾನಂದ ಮಡಿವಾಳ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಸದಸ್ಯರಾದ ಶಶಿಕಲಾ ಜಯಂತ್ ಕೋಟ್ಯಾನ್ ಬೆಳುವಾಯಿ ಮತ್ತು ಕವಿತಾ ಸುರೇಶ ಮರಿಯಾಡಿ ಮೊದಲಾದವರು ಉಪಸ್ಥಿತರಿದ್ದರು.
