ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಸಜಿಪಮುನ್ನೂರು ‘ಚಿಣ್ಣರ ಲೋಕ ಮಕೆದ ಕಲಾವಿದೆರ್’ ಟ್ರಸ್ಟಿನ ವತಿಯಿಂದ ಗುರುವಾರ ನಡೆದ ‘ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮವನ್ನು ಸ್ವರ್ಣೋದ್ಯಮಿ ನಾಗೇಂದ್ರ ವಿ.ಬಾಳಿಗಾ ಉದ್ಘಾಟಿಸಿದರು. ತುಳು ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್, ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ ಮತ್ತಿತರರು ಇದ್ದರು.

ಕಲೆ ಎಂಬುದು ಬಾಲ್ಯದಿಂದಲೇ ಆಸಕ್ತಿದಾಯಕ ವಿಷಯವಾಗಿದ್ದು, ಗಾಯನಕ್ಕೆ ದೇವರು ಕೂಡಾ ಒಲಿಯುತ್ತಾನೆ. ಇದರಿಂದಾಗಿ ಇಂತಹ ಸಂಸ್ಕಾರಯುತ ಮತ್ತು ಸಂಪದ್ಭರಿತ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಸ್ವರ್ಣೋದ್ಯಮಿ ನಾಗೇಂದ್ರ ವಿ.ಬಾಳಿಗಾ ಹೇಳಿದ್ದಾರೆ.
ತಾಲ್ಲೂಕಿನ ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಬಳಿ ಸಜಿಪಮುನ್ನೂರು ‘ಚಿಣ್ಣರ ಲೋಕ ಮಕೆದ ಕಲಾವಿದೆರ್’ ಟ್ರಸ್ಟಿನ ವತಿಯಿಂದ ಗುರುವಾರ ನಡೆದ ‘ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇವಳದ ಪ್ರ್ರಧಾನ ಅರ್ಚಕ ಮಾದಕಟ್ಟೆ ಈಶ್ವರ ಭಟ್ ಆಶೀರ್ವಚನ ನೀಡಿದರು.
ಚಿಣ್ಣರ ಅಧ್ಯಕ್ಷೆ ವಂಶ ಎನ್. ಭಂಡಾರಿ ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ, ವಕೀಲ ನರೇಂದ್ರನಾಥ ಭಂಡಾರಿ, ರಮೇಶ್ ಉಪಾಧ್ಯಾಯ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್, ಟ್ರಸ್ಟಿನ ಸಂಚಾಲಕ ಮೋಹನ್ದಾಸ್ ಕೊಟ್ಟಾರಿ, ಸಮಿತಿ ಉಪಾಧ್ಯಕ್ಷ ಕೇಪು ಗೌಡ, ಪ್ರಮುಖರಾದ ಚಂದ್ರಹಾಸ ಶೆಟ್ಟಿ, ನಾರಾಯಣ ಪೆರ್ನೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ‘ಮಹಿಷಮರ್ಧಿನಿ’ ಯಕ್ಷಗಾನ ಪ್ರಾಯೋಜಕ ವಿನೋದ್ ಸಂಗೀತ ತುಂಬೆ ಇವರನ್ನು ಗೌರವಿಸಲಾಯಿತು.
ಮಂಜು ವಿಟ್ಲ ಪ್ರಾಸ್ತಾವಿಕ ಮಾತನಾಡಿದರು. ಸುಭಾಶ್ಚಂದ್ರ ಜೈನ್ ಸ್ವಾಗತಿಸಿ, ಕಲಾವಿದ ರಾಜೇಶ್ ಕೊಟ್ಟಾರಿ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
