ಬಂಟ್ವಾಳ : ಪಾಣೆಮಂಗಳೂರಿಗೆ ಸಮೀಪದ ನರಹರಿ ಪರ್ವತದಲ್ಲಿರುವ ಶ್ರೀ ಸದಾಶಿವ ದೇವಸ್ಥಾನ ಸನ್ನಿಧಿಯಲ್ಲಿ ಆಟಿ ಅಮಾವಾಸ್ಯೆ ನಿಮಿತ್ತ ತೀರ್ಥಸ್ನಾನ ಆಗಸ್ಟ್ ೧ರಂದು ನಸುಕಿನ ವೇಳೆ ನಡೆಯಲಿದೆ.ಇದೇ ಸಂದರ್ಭ ನಾಗದೇವರಿಗೆ ವಿಶೇಷ ’ಆಶ್ಲೇಷ. ಪೂಜೆಯು’ ಜರಗಲಿರುವುದು ಎಂದು ದೇವಳದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
ಸರ್ವರೋಗ ನಿರ್ವಾಕ ಎಂಬ ಅನನ್ಯ ನಂಬಿಕೆಯಿಂದ ಏಳು ಎಲೆಗಳ ವೃತ್ತಾಕಾರದ ಜೋಡಣೆಯ ’ಸಪ್ತವರ್ಣಿ’ ಪಾಲಸ ಮರದ ರಸವನ್ನು ಸೂರ್ಯೋಧಯದ ಮೊದಲು ಸೇವಿಸುವ ದಿನವಾದ ಆಟಿ (ಅಷಾಡ) ಅಮಾವಾಸ್ಯೆಯಂದು ಪೌರಾಣಿಕ ಹಿನ್ನಲೆಯ ಕ್ಷೇತ್ರಗಳಲ್ಲಿ ಪವಿತ್ರ ಸ್ನಾನಗೈದರೆ ಸರ್ವಪಾಪ ನಿವಾರಣೆಗೊಂಡು ಇಷ್ಟಾರ್ಥ ಸದ್ದಿಸುವುದು ಎಂಬುದು ನಂಬಿಕೆ. ಈ ಹಿನ್ನ ಲೆಯಲ್ಲಿ ಪರ್ವತದ ತುತ್ತ ತುದಿಯಲ್ಲಿ ಬಂಡೆಕಲ್ಲಿನ ಮೇಲೆ ಪ್ರಾಕೃತಿಕವಾಗಿ ನಿರ್ಮಾಣವಾಗಿರುವ ಶಂಖ, ಚಕ್ರ, ಗದಾ, ಪದ್ಮ ಆಕಾರದ ತೀರ್ಥ ರೂಪಗಳಲ್ಲಿ ಅಂದು ಮುಂಜಾನೆ ಭಕ್ತರು ಮುಖ್ಯವಾಗಿ ನವ ವಧೂವರರು ಮಿಂದು ನಾಗ. ದೇವರು, ವಿನಾಯಕ , ಸದಾಶಿವ ದೇವರಿಗೆ ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ.
ಒಂದೊಮ್ಮೆ ದುರ್ಗಮವಾಗಿದ್ದ ನರಹರಿ ಪರ್ವತವನ್ನು ವಿಶೇಷ ಆಕರ್ಪಣೆಯ ಧಾರ್ಮಿಕ ಕ್ಷೇತ್ರವನ್ನಾಗಿ ಪರಿವರ್ತಿಸಿದವರು ಅಭಿವೃದ್ಧಿಯ ರೂವಾರಿ ದಿ.ಡಾ|ಕಲ್ಲಾಜೆ ಭಾಸ್ಕರ ಮಾರ್ಲ ಅವರುು ಇದೀಗ ೬ಕೋಟಿ ರೂ ವೆಚ್ಚದಲ್ಲಿ ಶಿಲಾಮಯ ದೇವಲಾಯ ನಿರ್ಮಾಣವಾಗಲಿದ್ದು, ಭಕ್ತಾಧಿಗಳೆಲ್ಲರೂ ಸಹಕರಿಸುವಂತೆ ಆಡಳಿತ ಮೋಕ್ತೆಸರರಾದ ಡಾ| ಪ್ರಶಾಂತ್ ಮಾರ್ಲ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ.ಆತ್ಮರಂಜನ್ ರೈ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹಾಗೆಯೇ ಅ.1 ರಂದು ತಾಲೂಕಿನ ಕಾರಿಂಜಕ್ಷೇತ್ರದಲ್ಲು ತೀರ್ಥಸ್ನಾನ ನಡೆಯಲಿದೆ.
