ಬಂಟ್ವಾಳ: ಭಾರತ ಶಿಕ್ಷಣ ರಥಯಾತ್ರೆ ಏಳನೇ ದಿನವಾದ ಶನಿವಾರ ಮರಳುಗಾಡಿನ ನಾಡು ರಾಜಸ್ಥಾನ ತಲುಪಿದ್ದು ಅಲ್ಲಿನ ಶಿಕ್ಷಣ ಪ್ರೇಮಿಗಳು ಸ್ವಾಗತಿಸಿಕೊಂಡರು. ಉದಯ ಪುರ ಸಮೀಪದ ನಾಥ್ ದ್ವಾರ ಎಂಬಲ್ಲಿ ಸ್ಥಳೀಯ ಶಿಕ್ಷಣ ಪ್ರೇಮಿ ಮಹೇಶ್ ಭಾಯ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಬಳಿಕ ಜೈಪುರಕ್ಕೆ ಬೀಳ್ಕೊಟ್ಟರು.
ಈ ಸಂದರ್ಭ ಉಮಾಸಿಂಗ್ ಚೌಹಾನ್, ಭಗವಂತ್ ಮೇಘಾವಾಲ, ದಿನೇಶ್ ಕೋಠಾರಿ, ಭಾರತ ಶಿಕ್ಷಣ ರಥಯಾತ್ರೆಯ ರುವಾರಿ ಪ್ರಕಾಶ್ ಅಂಚನ್, ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ಅಂಚನ್, ಸದಸ್ಯ ರಾಮಚಂದ್ರ ಪೂಜಾರಿ ಕರೆಂಕಿ ಮತ್ತಿತತರರು ಹಾಜರಿದ್ದರು. ದಾರಿ ಮಧ್ಯೆ ರಾಜಸಮಂದ್ ದೇವಗಡದ ರಾಜಕೀಯ ಉಚ್ಛ ಮಾಧ್ಯಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಲಾಯಿತು. ವಿದ್ಯಾ ಸಂಸ್ಥೆಗಳಿಗೆ ಸ್ವತಂತ್ರ ಜವಬ್ದಾರಿಯನ್ನು ನೀಡಬೇಕು, ರಾಜಕೀಯ ಹಸ್ತಕ್ಷೇಪವಾಗದಿದ್ದರೆ ಶಿಕ್ಷಣ ಸಂಸ್ಥೆಗಳು ಉತ್ತಮವಾಗಿ ಕೆಲಸ ನಿರ್ವಹಿಸಲು ಸಾಧ್ಯವಿದೆ ಎಂದು ಇಲ್ಲಿನ ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದರು.
