ಬಂಟ್ವಾಳ: ತುಳುವ ತಿಂಗಳ ಕಾರ್ತೆಲ್ ಮತ್ತು ಆಟಿ ತಿಂಗಳಲ್ಲಿ ಪರಶುರಾಮ ಸೃಷ್ಟಿ ಯ ತುಳುನಾಡಿನಲ್ಲಿ ಭತ್ತದ ನಾಟಿ ಕೃಷಿ ಯ ಸಮಯ.ಹಿಂದಿನ ಕಾಲದಲ್ಲಿ ಕೃಷಿ ಯ ಕೆಲಸ ಎಂದರೆ ಜಾತ್ರೆಯ ಸಂಭ್ರಮ.
ಭತ್ತದ ಕೃಷಿ ಯೇ ಜೀವನ, ಜೀವಾಳ ಎಂದು ನಂಬಿರುವ ತುಳುವ ನಾಡಿನ ಪ್ರತಿ ಕೃಷಿಕನೂ ಗದ್ದೆಗಳಲ್ಲಿ ಉಳುಮೆ ಮಾಡಿ ನೇಜಿ ನೆಡುವ ಕಾರ್ಯ ಮಾಡುತ್ತಿದ್ದರು.ಬರಬರುತ್ತಾ ಕೃಷಿಗೆ ಜನರ ಕೊರತೆ ಎದುರಾಗಿ ತಾಂತ್ರಿಕವಾಗಿ ಕೃಷಿ ಮಾಡಲಾರಂಭಿಸಿದರು.ನೋಡನೋಡುತ್ತಿದ್ದಂತೆ ಭತ್ತ ಗದ್ದೆಗೆ ಹಾಕಿ ನೇಜಿ ಮಾಡಿ ಬಳಿಕ ನೇಜಿ ತೆಗೆದು ಗದ್ದೆಯನ್ನು ಹೋರಿ,ಅಥವಾ ಕೋನಗಳ ಮೂಲಕ ಗದ್ದೆಯನ್ನು ಉಳುಮೆ ಮಾಡಿ ಬಳಿಕ ನೇಜಿ ನೆಡುವ ಕೆಲಸಗಳು ನಡೆಯುತ್ತಿತ್ತು.ಬರಬರುತ್ತಾ ಎಲ್ಲವೂ ಮಾಯವಾಗಿ ಯಾಂತ್ರೀಕೃತ ಕೃಷಿ ಆರಂಭವಾಗಿ ಭತ್ತದ ಕೃಷಿಯೇ ನಿಂತು ಹೋಗುವ ಹಂತದಲ್ಲಿ ನಾವಿದ್ದೇವೆ.

ಈ ಕಾಲಘಟ್ಟದಲ್ಲಿ ಮತ್ತೆ ಕೃಷಿ ಪದ್ದತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಂಗಳೂರು ಕೆನರಾ ಕಾಲೇಜು ತುಳು ಸಂಘ ಪ್ರಯತ್ನ ಮಾಡುತ್ತಿದ್ದರೆ, ಅಲ್ಲಿನ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆ ಯ ಪ್ರಾತ್ಯಕ್ಷಿಕೆ ನೀಡಿ ಕೆಸರಿನಲ್ಲಿ ಸಂಭ್ರಮಿಸಿದರು.ಮಂಗಳೂರು ಕೆನರಾ ಕಾಲೇಜಿನ ಸುಮಾರು ನಲ್ವತ್ತು ಕ್ಕೂ ಅಧಿಕ ವಿದ್ಯಾರ್ಥಿಗಳು ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಆಲಾಡಿ ನಿವಾಸಿ ಉದ್ಯಮಿ ಮಹಾಬಲ ಕೊಟ್ಟಾರಿ ಅವರ ಗದ್ದೆಗೆ ಸೀದಾ ಬಂದವರು ಅಲ್ಲಿ ಆರಂಭದಲ್ಲಿ ನೇಜಿ ತೆಗೆದರು ಬಳಿಕ ಟಿಲ್ಲರ್ ಮೂಲಕ ಗದ್ದೆ ಉಳುಮೆ ಮಾಡಿದರು.
ಉಳುಮೆ ಮಾಡಿ ಹದ ಮಾಡಿದ ಗದ್ದೆಯಲ್ಲಿ ನೇಜಿ ನೆಟ್ಟು ಕೃಷಿ ಪರಂಪರೆಯ ಅರ್ಥವನ್ನು ಸವಿದರು.ನೇಜಿ ನೆಡುವ ಸಂದರ್ಭದಲ್ಲಿ ಪಾಡ್ದನ ಹಾಡಿದರು. ಬಳಿಕ ಗದ್ದೆಯಲ್ಲಿ ಆಟ ಆಡಿದರು .ಕೇವಲ ಪಾಠ ಮಾತ್ರ ಸಾಲದು ಇಂತಹ ಕಾರ್ಯಕ್ರಮ ಗಳು ಮಕ್ಕಳ ಬೆಳವಣಿಗೆ ದಾರಿ ದೀಪವಾಗಲಿದೆ.ಕೃಷಿ ಸಂಸ್ರ್ಕತಿಯ ನಾಡಿನಲ್ಲಿ ಜೀವನ ಮಾಡುವ ಪ್ರತಿಯೊಬ್ಬ ನಾಗರಿಕ ನಿಗೂ ಕೃಷಿಯ ಬಗ್ಗೆ ಆಸಕ್ತಿ ಮತ್ತು ಮಾಹಿತಿ ಬೇಕಾಗಿದೆ , ಅನಿಟ್ಟಿನಲ್ಲಿ ಕೆನಾರಾ ಕಾಲೇಜಿನ ತುಳು ಸಂಘ ಉತ್ತಮಕೆಲಸ ಮಾಡಿದೆ . ಇಂತಹ ತುಳು ಸಂಸ್ರ್ಕತಿಯ ಸತ್ವವನ್ನು ವಿದ್ಯಾರ್ಥಿಗಳಿಗೆ ನೆನಪಿಸುವ ಕೆಲಸ ಮಾಡುವ ಇವರ ಮನಸ್ಸು ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಗದ್ದೆಯ ಮಾಲಕ ಮಹಾಬಲ ಕೊಟ್ಟಾರಿ ಹೇಳಿದರು.
