ಕೈಕಂಬ : ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟದ `ಶ್ರೀ ಧರ್ಮ ದೇವತಾ ಕುಟೀರ'(ಕಚೇರಿ) ಜು. 7ರಂದು(ಭಾನುವಾರ) ಗುರುಪುರ ಗೋಳಿದಡಿಗುತ್ತಿನ ಬಳಿಯಲ್ಲಿ ಹೊಸದಾಗಿ ನಿರ್ಮಿಸಲಾದ ಹಳೆ ಮಾದರಿಯ ಮನೆಯಲ್ಲಿ ಗುತ್ತು, ಬೀಡು, ಬಾವ, ಬಾರಿಕೆ, ಪರಾಡಿ ಮತ್ತು ಮಾಗಂದಡಿಗಳ ಗಡಿಕಾರರು, ಮುಕ್ಕಾಲರು ಹಾಗೂ ಪ್ರತಿನಿಧಿಗಳ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು.ದೀಪ ಬೆಳಗಿಸಿದ ಬಳಿಕ ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಗಣ್ಯರ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು.
ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟದೊಂದಿಗೆ ಸೇರಿಕೊಂಡಿರುವ ಎಲ್ಲ ಗುತ್ತು, ಬಾರಿಕೆ, ಬೀಡು, ಬಾವ ಪರಾಡಿಗಳಿಂದ ನ್ಯಾಯ-ಧರ್ಮ ಒದಗಿಸುವ ಕೆಲಸವಾಗಲಿ. ಇಂದಿನ ಈ ದೀಪ ನಿರಂತರ ಬೆಳಗಲಿ. ತುಳು ಸಂಪ್ರದಾಯದ ಪಡಿಯಚ್ಚಿನಲ್ಲಿ ಹೆಚ್ಚೆಚ್ಚು ಕೆಲಸ ನಡೆಯಲಿ. ಈ ಕೂಟದ ಕೆಲಸ ಎಲ್ಲೆಡೆ ಪಸರಲಿ ಎಂದು ಚಂದ್ರಶೇಖರ ಅಜಿಲ ಬೆಳ್ಳೂರು ಭಂಡಾರಮನೆ, ರಘುವೀರ ಮದ್ಯ ವಾಲ್ಪಾಡಿಗುತ್ತು, ಬೆಳ್ತಂಗಡಿ ಕನಿಂಜೆಗುತ್ತು ಮಾಜಿ ಮೇಯರ್ ರಜನಿ ದುಗ್ಗಣ, ಪಾವೂರು ಭಂಡಾರಮನೆ ಸೀತಾರಾಮ ಬಿ ಕರ್ಕೇರ ಹಾರೈಸಿದರು.
ಮಹೇಶ್ ಶೆಟ್ಟಿ ತಿಮರೋಡಿ ಬೀಡು ಮಾತನಾಡುತ್ತ, ಬ್ರಹ್ಮಶ್ರೀ ಶಿರೋಮಣಿ ಕೆ ಎಸ್ ನಿತ್ಯಾನಂದರ ಆಶೀರ್ವಾದ, ಮಾರ್ಗದರ್ಶನ ಮತ್ತು ವರ್ಧಮಾನ ದುರ್ಗಾಪ್ರಸಾದ ಶೆಟ್ಟರ ಮುಂದಾಳತ್ವವಿರುವ ಈ ಕೂಟ ತುಳುನಾಡಿನ ಹಳೆಯ ಪರಂಪರೆಯ ಧರ್ಮಾಡಳಿತ-ಸಂಸ್ಕøತಿಯ ಪುನರುತ್ಥಾನಕ್ಕೆ ಸಾಕ್ಷ್ಯಿ ಎಂಬಂತೆ ಕೆಲಸ ಮಾಡುತ್ತಿದೆ. ಇದು ಕೂಟದ ಕೆಲಸ ಜಿಲ್ಲೆ, ರಾಜ್ಯ ಎಲ್ಲೆ ಮೀರಿ ದೇಶದಲ್ಲಿ ಪರಿಸರಿಸಬೇಕೆಂಬುದು ಮೂಲ ಆಶಯವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಕೆಲಸಗಳು ನಡೆದಿವೆ. ಇದಕ್ಕೆ ಧರ್ಮ-ದೇವತೆಗಳ ಕೃಪೆ ಇರಲಿ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಜಗದೀಶ ಅಧಿಕಾರಿ, ನವೀನ್ಚಂದ್ರ ಆಳ್ವ, ತಿರುವೈಲುಗುತ್ತು, ಸತೀಶ್ ಶೆಟ್ಟಿ ಮೂಡುಜೆಪ್ಪುಗುತ್ತು, ಯತಿರಾಜ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಕೊಳಕ್ಕೆಬೈಲು, ಸತೀಶ್ ಕಾವ, ಸುಧಾಕರ ಶೆಟ್ಟಿ ಕುತ್ಯಾರು ಮಾಗಂದಡಿ, ಪದ್ಮನಾಭ ಶೆಟ್ಟಿ ಮೂಡಬಿದ್ರೆ, ಉಷಾ ವರ್ಧಮಾನ ಶೆಟ್ಟಿ, ಉಮೇಶ್ ರೈ ಪದವು ಮೇಗಿನಮನೆ, ದಿವಾಕರ ಸಾಮಾನಿ ಚೇಳ್ಯಾರುಗುತ್ತು, ಪ್ರಭಾಕರ ಶೆಟ್ಟಿ ಬಡಕರೆ ಬಾಳಿಕೆ ಎಕ್ಕಾರು, ರೋಹಿತ್ ಕುಮಾರ್ ಕಟೀಲ್, ಡಾ. ರಾಜೇಶ್ ಆಳ್ವ, ಭಾಗ್ಯರಾಜ ಆಳ್ವ, ಮೋಹನ್ ಶೆಟ್ಟಿ ಯೆಯ್ಯಾಡಿ, ಪರಮಾನಂದ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಕೂಟದ ಕಾರ್ಯವೈಖರಿ, ಗುತ್ತು, ಬೀಡು, ಬಾವ, ಬಾರಿಕೆ, ಪರಾಡಿಗಳ ಸಮಗ್ರ ಮಾಹಿತಿಯುಳ್ಳ ಕೈಪಿಡಿ ಹೊರತರುವ ನಿಟ್ಟಿನಲ್ಲಿ `ಕೈಪಿಡಿ ಸಮಿತಿ’ ರಚಿಸಲಾಯಿತು.
