ಬಂಟ್ವಾಳ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಬಂಟ್ವಾಳ ತಾಲೂಕು,ಧರ್ಮಸ್ಥಳ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ವತಿಯಿಂದ
ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಾಭಿಷೇಕದ ಪ್ರಯಕ್ತ ಜನಮಂಗಲ ಕಾರ್ಯಕ್ರಮದಡಿ ಬಂಟ್ವಾಳ ತಾಲೂಕಿನ 77 ಮಂದಿ ನಿರ್ಗತಿಕ, ವಿಕಲಚೇತನರಿಗೆ ಗಾಲಿಕುರ್ಚಿ ಸಹಿತ ವಿವಿಧ ಸಲಕರಣೆ ವಿತರಣಾ ಕಾರ್ಯಕ್ರಮ ಶನಿವಾರ ಬಂಟ್ವಾಳ ಎಸ್.ಡಿ.ಎಂ. ಕಲ್ಯಾಣ ಮಂಟಪದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಎ.ಶ್ರೀಹರಿ ಅವರು ಉದ್ಘಾಟಿಸಿ, ಇತ್ತೀಚೆಗೆ ಧರ್ಮಸ್ಥಳದಲ್ಲಿ ನಡೆದ ಮಸ್ತಕಾಭಿಷೇಕದ ಸವಿನೆನಪಿಗಾಗಿ ಡಾ.ಹೆಗ್ಗಡೆಯವರು ಜನಮಂಗಲ ಯೋಜನೆಯಡಿ ಸಮುದಾಯ ಮತ್ತು ಅಭಿವೃದ್ದಿ ವಿಭಾಗದಿಂದ ರಾಜ್ಯದ 5000 ಮಂದಿ ವಿಕಲಚೇತನರಿಗೆ ವಿವಿಧ ಸಲಕರಣೆ ನೀಡಲು ನಿರ್ಧರಿಸಲಾಗಿದೆ.ಮೊದಲ ಹಂತವಾಗಿ 1600 ಮಂದಿಗೆ ,ಬಂಟ್ವಾಳ ತಾ.ನ 77 ಮಂದಿ ವಿಕಲಚೇತನರಿಗೆ ವಿತರಿಸಲಾಗುತ್ತಿದೆ ಎಂದರು. ರಾಜ್ಯದಲ್ಲಿ ಎದುರಾಗುವ ಸಮುದಾಯದ ಸಮಸ್ಯೆಗಳಿಗೆ ಶ್ರೀ.ಕ್ಷೇತ್ರ ಧರ್ಮಸ್ಥಳದಿಂದ ತುರ್ತು ಸ್ಪಂದನ ನೀಡಲಾಗುತ್ತಿದೆ. ನಮ್ಮೂರ ನಮ್ಮ ಕೆರೆ ಯೋಜನೆಯಡಿ ಕೆರೆಗಳ ಪುನರ್ ಜೀವನಗೊಳಿಸಿ ಅಂರ್ತಜಲ ವೃದ್ದಿಗೆ ಕಾರ್ಯಕ್ರಮ ಹಾಕಲಾಗುತ್ತಿದೆ ಎಂದರು. ರಾಷ್ಟ್ರದ ಹೊಸ ಕನಸುಗಳು ಸಾಕಾರಗೊಳ್ಳುವಲ್ಲಿ ನಾವೆಲ್ಲರೂ ಕಟಿಬದ್ದರಾಗಬೇಕಾಗಿದ್ದು, ಸರಕಾರದ ಯೋಜನೆಗಳನ್ನು ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಜೋಡಿಸಿಕೊಂಡು ಆರ್ಥಿಕ ವಾಗಿ ಸದೃಡವಾಗುವಂತೆ ಕರೆ ನೀಡಿದರು.

ಬಂಟ್ವಾಳ ಪುರಸಭೆ ಹಿರಿಯ ಸದಸ್ಯ ಎ. ಗೋವಿಂದ ಪ್ರಭು ಅಧ್ಯಕ್ಷತೆ ವಹಿಸಿ ಮಾತನಾಡಿ ಕಸ, ಕಡ್ಡಿ, ತ್ಯಾಜ್ಯದಿಂದ ಮಲೀನಗೊಳ್ಳುತ್ತಿರುವ ಜಿಲ್ಲೆಯ ಜೀವನದಿ ನೇತ್ರಾವತಿಯ ಶುಚಿತ್ವವನ್ನು ಕಾಪಾಡುವ ಅಗತ್ಯವಿದ್ದು,ಈ ನಿಟ್ಟಿನಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಆಂದೋಲನ ನಡೆಯಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಆಳ್ವ,ಕೇಂದ್ರ ಒಕ್ಕೂಟ ತಾಲೂಕು ಸಮಿತಿ ಅದ್ಯಕ್ಷ ಮಾಧವ ವಳವೂರು,ಬಂಟ್ವಾಳ ತಾ.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ, ಬಿ.ಸಿ.ರೋಡ್ ವಲಯದ ಅಖಿಲ ಕರ್ನಾಟಕ ಜಾಗೃತಿ ವೇದಿಕೆ ವಲಯಾಧ್ಯಕ್ಷ ರೋನಾಲ್ಡ್ ಡಿ.ಸೋಜ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಕೇಂದ್ರ ಒಕ್ಕೂಟದ ಮಾಜಿ ಸದಾನಂದ ನಾವೂರ, ಪತ್ರಕರ್ತ ವೆಂಕಟೇಶ್ ಬಂಟ್ವಾಳ, ಫರಂಗಿಪೇಟೆ ಸೇವಾಂಜಲಿ ಟ್ರಸ್ಟ್ ನ ಟ್ರಸ್ಟಿ ಕೃೃಷ್ಣಕುಮಾರ ಪೂಂಜಾ , ಗ್ರಾಮಾಭಿವೃದ್ದಿ ಯೋಜನೆಯ ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ , ಬಿಸಿರೋಡ್ ವಲಯ ಮೇಲ್ವಿಚಾರಕ ಕೇಶವ ವೇದಿಕೆಯಲ್ಲಿದ್ದರು. .
ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಸ್ವಾಗತಿಸಿ,ಪ್ರಸ್ತಾವನೆಗೈದರು. ಮೇಲ್ವಿಚಾರಕಿ ಅಶ್ವಿನಿ ವಂದಿಸಿದರು. ಮೇಲ್ವಿಚಾರಕಿ ಹರಿಣಾಕ್ಷೀ ಕಾರ್ಯಕ್ರಮ ನಿರೂಪಿಸಿದರು.
