ಬಂಟ್ವಾಳ: ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಆಂತರಿಕ ಗುಣಮಟ್ಟ ಭರವಸೆ ಕೋಶ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಉದ್ಯೋಗ ಭರವಸೆ ಕೋಶ ಹಾಗೂ ಮಹಿಳಾ ಜಾಗೃತಿ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಮಾದಕ ದ್ರವ್ಯ ನಿರ್ಮೂಲನಾ ಜಾಗೃತಿ , ಮಹಿಳಾ ಕಾನೂನು ಅರಿವು ಹಾಗೂ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶಗಳ ಮಾಹಿತಿ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಗುಲಾಬಿ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪುಂಜಾಲಕಟ್ಟೆ ಠಾಣೆಯ ಉಪನಿರೀಕ್ಷರಾದ ಸೌಮ್ಯರವರು ಭಾಗವಹಿಸಿ ನಿರಂತರ ಅಭ್ಯಾಸ ನಿರ್ದಿಷ್ಟ ಗುರಿ ಹಾಗೂ ಪರಿಶ್ರಮ ವಿದ್ಯಾರ್ಥಿ ಜೀವನವನ್ನು ಯಶಸ್ವಿಯಾಗಿಸುತ್ತದೆ ಎಂದರು. ವಿದ್ಯಾರ್ಥಿಗಳಿಗೆ ಪೋಲಿಸ್ ಇಲಾಖೆಯಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಮಾಹಿತಿ, ಪರೀಕ್ಷೆಗೆ ತಯಾರಿ, ದಾಖಲೆಗಳ ಅವಶ್ಯಕತೆ ಹಾಗೂ ವಿದ್ಯಾರ್ಹತೆಗಳ ಬಗ್ಗೆ ಮಾಹಿತಿ ನೀಡಿದರು. ಇಂದಿನ ಯುವಪೀಳಿಗೆ ಹಾಗೂ ವಿದ್ಯಾರ್ಥಿ ಜೀವನಕ್ಕೆ ಅಡ್ಡಿಯಾಗಿರುವ ಮಾದಕ ದ್ರವ್ಯ ಮತ್ತು ಅದರ ದುಷ್ಪರಿಣಾಮಗಳ ಕುರಿತು ತಮ್ಮ ಅನುಭವದ ಮಾತುಗಳನ್ನಾಡಿದರು. ಮಹಿಳೆಯರು ಮನೆಯ ಒಳಗೆ ಮತ್ತು ಹೊರಗೆ ಎದುರಿಸುವ ದೌರ್ಜನ್ಯಗಳು ಹಾಗೂ ಅದರ ವಿರುದ್ದ ಇರುವ ರಕ್ಷಣೆ ಮತ್ತು ಕಾನೂನುಗಳ ಮಾಹಿತಿ ನೀಡಿದರು. ಹದಿಹರೆಯದ ಆಕರ್ಷಣೆಗಳು ಭವಿಷ್ಯದ ಜೀವನವನ್ನು ಹಾಳು ಮಾಡದಂತೆ ಜಾಗೃತಿ ವಹಿಸಲು ಸೂಚಿಸಿದರು. ತಾಪಂ ಸದಸ್ಯಪ್ರಭಾಕರ ಪ್ರಭು ಮುಖ್ಯ ಅತಿಥಿಗಳಾಗಿದ್ದರು. ಸಭಾಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ಭಟ್ ಮಾತನಾಡಿ,ವಿದ್ಯಾರ್ಥಿಗಳಿಗೆ ಭವಿಷ್ಯದ ಕನಸುಗಳಿಗೆ ಹಾಗೂ ನನಸಾಗಿಸುವ ಪ್ರಯತ್ನಗಳಿಗೆ ಈ ಶಿಬಿರ ಪ್ರೇರಣೆಯಾಗಲಿ ಎಂದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕಿ ಸೌಮ್ಯ ಹೆಚ್.ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಎನ್ಎಸ್ಎಸ್ ಯೋಜನಾಧಿಕಾರಿ ದೇವಿಪ್ರಸಾದ್ ಸ್ವಾಗತಿಸಿ ಹನುಮಂತಯ್ಯ ಜಿ.ಹೆಚ್ ವಂದಿಸಿದರು.ವಿದ್ಯಾರ್ಥಿಗಳಾದ ನಿಶ್ವಿತಾ ನಿರ್ವಹಿಸಿ ಮನೀಶ್ ಪ್ರಾರ್ಥಿಸಿದರು.
