ಎಡಪದವು: ಗಂಜಿಮಠದ `ಶ್ರೀ ವಿಜಯ ವಾಹಿನಿ’ ವತಿಯಿಂದ 15ನೇ ವರ್ಷದ ಉಚಿತ ಬರೆಯುವ ಪುಸ್ತಕ ವಿತರಣೆ ಮತ್ತು ಸಮ್ಮಾನ ಕಾರ್ಯಕ್ರಮ ಜೂನ್ 22ರಂದು ಶನಿವಾರ ಮಳಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ತಾ.ಪಂ. ಸದಸ್ಯ ಜಿ. ಸುನ್ ಅವರ ಮುಂದಾಳತ್ವದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಗಂಜಿಮಠ ಆರೋಗ್ಯ ಕೇಂದ್ರದ ವೈದ್ಯಾದಿಕಾರಿ ಅಮಿತ್ರಾಜ್ ಅವರು ಉದ್ಘಾಟಿಸಿ, ಮಕ್ಳಳಿಗೆ ಬರದ ಸಾಮಗ್ರಿಗಳನ್ನು ನೀಡುವುದು ಅತ್ಯಂತ ಉತ್ತಮ ಕೆಲಸಗಳಲ್ಲಿ ಒಂದಾಗಿದೆ. ಇದರಿಂದ ಬಡ ಕುಟಂಬದ ಮಕ್ಕಳಿಗೆ ಪ್ರಯೋಜನವಾಗುತ್ತಿದೆ. ಈ ನಿಟ್ಟಿನಲ್ಲಿ ವಿಜಯವಾಹಿ ಸಂಘದ ಕೆಲಸ ಶ್ಲಾಘನೀಯ. ಇದೇ ರೀತಿ ಅನೇಕ ಸಂಘಸಂಸ್ಥೆಗಳು ಬಡಜನತೆಗೆ ನೆರವಾಗುವ ಕೆಲಸಗಳನ್ನು ಹಮ್ಮಿಕೊಳ್ಳಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಮಳಲಿ ಪುಷ್ಪಪುರ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ಸತ್ಯನಾರಾಯಣ ಉಪಾಧ್ಯಾಯ ಅವರು ಮಾತನಾಡಿ, ಮಕ್ಕಳು ತನ್ನ ಪೋಷಕರಿಗಿಂತಲೂ ಹೆಚ್ಚಾಗಿ ಶಿಕ್ಷಕರ ಜೊತೆ ಇರುತ್ತಾರೆ. ಗುರುಗಳು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ನಿರ್ಮಾತೃಗಳು.
ಇಂಥಾ ಗುರುಗಳನ್ನು ಇಲ್ಲಿ ವಂದಿಸುವ ಕಾರ್ಯ ನಡೆದಿದೆ. ಅದೇ ರೀತಿ ವಿಜಯವಾಹಿನಿ ಸಂಸ್ಥೆಯು ಬಡವರಿಗೆ ಸಹಕಾರಿಯಾಗುವ ಕೆಲಸ ಮಾಡುತ್ತಿದ್ದು, ಸಂಘಕ್ಕೆ ಇಂತಹ ಚಟುವಟಿಕೆಗಳನ್ನು ಮಾಡಲು ದೇವರು ಅವರಿಗೆ ಇನ್ನಷ್ಟು ಶಕ್ತಿ ಕೊಡಲಿ ಎಂದು ಹಾರೈಸರು. ಸಮ್ಮಾನ ಸ್ವೀಕರಿಸಿ ಮಾತಾಡಿದ ನಿವೃತ್ತ ಶಿಕ್ಷಕ ಅರುಣ್ ಕುಮಾರ್ ಶೆಟ್ಟಿ, ಮಕ್ಕಳು ಎಲ್ಲಕ್ಕಿಂತಲೂ ಹೆಚ್ಚಾಗಿ ಬರೆಯುವ ಪುಸ್ತಕಗಳನ್ನು ಪ್ರೀತಿಸುತ್ತಾರೆ ಎನ್ನುವುದನ್ನು ನನ್ನ ವೃತ್ತಿಜೀವನದಲ್ಲಿ ಕಂಡುಕೊಂಡಿದ್ದೇನೆ. ಬೇರೆ ಉಡುಗೊರೆಗಳನ್ನು ನೀಡುವ ಬದಲು ಬರವಣಿಗೆಯ ಪುಸ್ತಕ ನೀಡುವುದು ಅವರ ಭವಿಷ್ಯಕ್ಕೆ ಸಹಕಾರಿಯಾಗಬಲ್ಲುದು ಎಂದರು.
ಶ್ರೀ ವಿಜಯವಾಹಿನಿ ಗಂಜಿಮಠ ಇದರ ಅಧ್ಯಕ್ಷರು, ಪ್ರಸ್ತುತ ತಾ.ಪಂ. ಸದಸ್ಯರಾಗಿರುವ ಜಿ. ಸುನಿಲ್ ಅವರು ಸ್ವಾಗತಿಸಿ ಮಾತನಾಡಿ, ನಮ್ಮ ಸಂಸ್ಥೆಯು ಬಡವರನ್ನು ಗುರುತಿಸಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದೆ. ಬಡ ಮಕ್ಕಳಿಗೆ ಪುಸ್ತಕ ವಿತರಣೆ, ಬಡ ಹೆಣ್ಮಕ್ಕಳ ಮದುವೆಗೆ ಆರ್ಥಿಕ ನೆರವು ಸೇರಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದೆ. ಇದಕ್ಕೆ ಸಹಕಾರಿಯಾದ ಎಲ್ಲರಿಗೂ ನಮ್ಮ ಸಂಘ ಚಿರಋಣಿಯಾಗುತ್ತದೆ ಎಂದರು.

ಈ ವೇಳೆ ಮಳಲಿಯ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಡಗ ಉಳಿಪಾಡಿ, ತೆಂಕ ಉಳಿಪಾಡಿ, ಮೊಗರು ಗ್ರಾಮದ ಆರ್ಥಿಕವಾಗಿ ಹಿಂದುಳಿದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಒಟ್ಟು 1ಲಕ್ಷದ 60 ಸಾವಿರ ರೂ. ಮೌಲ್ಯದ ಉಚಿತ ಬರೆಯುವ ಪುಸ್ತಕ ವಿತರಿಸಲಾಯಿತು. ಪ್ರಸ್ತುತ ವರ್ಷದಲ್ಲಿ ಮದುವೆಯಾದ ಬಡ ಹೆಣ್ಣುಮಕ್ಕಳ ಕುಟುಂಬಿಕರಿಗೆ ಧನ ಸಹಾಯ ವಿತರಿಸಲಾಯಿತು. ಎಕೆಯು ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಅರುಣ್ ಕುಮಾರ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಅಲ್ಲದೆ ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರೌಢಶಾಲೆ ಮಳಲಿಗೆ ಶೇ.99 ಫಲಿತಾಂಶ ತಂದುಕೊಟ್ಟ ಎಲ್ಲ ವಿದ್ಯಾರ್ಥಿಗಳನ್ನು, ಅವರ ಸಾಧನೆಗೆ ಕಾರಣೀಭೂತರಾದ ಶಿಕ್ಷಕನ್ನು ಅಭಿನಂದಿಸಲಾಯಿತು. ಇತ್ತೀಚೆಗೆ ಮೃತಪಟ್ಟ ನಿವೃತ್ತ ಶಿಕ್ಷಕ ಮಾದಮಯ್ಯ ಹಾಗು ಹ್ಯಾರಿ ರಸ್ಕೀನ್ಹಾ ಅವರಿಗಾಗಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಜೂನ್ 15ರಂದು ಕುಕ್ಕಟ್ಟೆ ಶಾಲೆಯಲ್ಲಿ ಶ್ರೀ ವಿಜಯ ವಾಹಿನಿ ಅಧ್ಯಕ್ಷ, ತಾಪಂ ಸದಸ್ಯ ಜಿ ಸುನಿಲ್ ಮುಂದಾಳತ್ವದಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಮೊಗರು ಹಾಗೂ ಸೂರಲ್ಪಾಡಿ ಪ್ರಾಥಮಿಕ ಶಾಲೆಯ ಒಂದರಿಂದ ಏಳನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಒಟ್ಟು 45 ಸಾವಿರ ರೂ. ಮೌಲ್ಯದ ಉಚಿತ ಬರೆಯುವ ಪುಸ್ತಕ ಹಾಗೂ ಲೇಖನಿ ಸಾಮಗ್ರಿ ವಿತರಿಸಲಾಗಿತ್ತು.
ಸಂಘದ ಕಾರ್ಯದರ್ಶಿ ದಯಾನಂದ ಪೂಜಾರಿ ವರದಿ ವಾಚಿಸಿದರು. ಪುರುಷೋತ್ತಮ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಝಾಕಿರ್ ಆರ್.ಎಸ್., ಮಾಜಿ ಪಂ. ಅಧ್ಯಕ್ಷೆ ಜೆಸಿಂತಾ ಡಿ.ಕುನ್ಹಾ, ವೆಲೇರಿಯನ್, ಅಬ್ಬಾಸ್, ಶಿಕ್ಷಕ ಶ್ರೀಪತಿ, ಬೂಬ ಪೂಜಾರಿ, ಸುಧಾಕರ ಟೈಲರ್, ಉಮರಬ್ಬ ಸೇರಿ ಹಲವರು ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ನೇತ್ರಾವತಿ ಧನ್ಯವಾದಗೈದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮವನ್ನು ವೈದ್ಯಾದಿಕಾರಿ ಅಮಿತ್ರಾಜ್ ಉದ್ಘಾಟಿಸಿದರು.
ನಿವೃತ್ತ ಶಿಕ್ಷಕ ಅರುಣ್ ಕುಮಾರ್ ಅವರನ್ನು ಸಮ್ಮಾನಿಸಲಾಯಿತು

