ಬಂಟ್ವಾಳ : ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ಬರವಣಿಗೆ ಪುಸ್ತಕ ವಿತರಣಾ ಕಾರ್ಯಕ್ರಮವು ಶಾಲಾ ಆವರಣದಲ್ಲಿ ಜರಗಿತು. ಒಂದನೇ ತರಗತಿಗೆ ಹೊಸದಾಗಿ ದಾಖ ಲಾದ ವಿದ್ಯಾರ್ಥಿಗಳನ್ನು ಗುಲಾಬಿ ಹೂವು ಮತ್ತು ಚಾಕಲೇಟ್ ನೀಡಿ ಸ್ವಾಗತಿಸಲಾಯಿತು. ಶಾಲಾ ಸಂಚಾಲಕರಾದ ಕೆ.ನರೇಂದ್ರ ನಾಥ ಭಂಡಾರಿ ಯವರು ಕಾರ್ಯಕ್ರಮಕ್ಕೆ ಚಾಲನೇ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾಭಿಮಾನಿಗಳಾದ ರಘು.ಎಲ್.ಶೆಟ್ಟಿ ದೇವಸ್ಯ ಮತ್ತು ಗಂಗಾಧರ ಪೂಜಾರಿ ಕೊಪ್ಪಳ ರವರು ಒದಗಿಸಿಕೊಟ್ಟ ಉಚಿತ ಬರವಣಿಗೆ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಬಳಿಕ ಮಕ್ಕಳಿಗೆ ಸಿಹಿ ತಿಂಡಿ ಹಂಚಿ ಅನಂತರ ಅಕ್ಷರ ದಾಸೋಹದ ಬಿಸಿಯೂಟ ವ್ಯವಸ್ಥೆಯನ್ನು ಪುನರಾರಂಬಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಬೆಳ್ಳೂರು ಮಠ ಮತ್ತು ಸದಸ್ಯ ಪ್ರಸನ್ನ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು.
ಈ ಶಾಲೆಯಲ್ಲಿ ಈಗಲೂ ಗರಿಷ್ಟ ಸಂಖ್ಯೆಯ ವಿದ್ಯಾರ್ಥಿಗಳಿರುವುದರಿಂದ ಖಾಯಂ ಶಿಕ್ಷಕರ ನೇಮಕಾತಿ ಹಾಗೂ ಇತರೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದು ಅತಿ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮತ್ತು
ಸರಕಾರದ ವತಿಯಿಂದ ಸೂಕ್ತ ಕ್ರಮ ಜರಗಿಸಬೇಕೆಂದು ವಿದ್ಯಾರ್ಥಿಗಳ ಹೆತ್ತವರು ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಆಗ್ರಹಿಸಿರುತ್ತಾರೆ. ಶಾಲಾ ಆಡಳಿತ ಮಂಡಳಿ ವತಿಯಿಂದ ಈ ಬಾರಿಯ ಬೇಸಿಗೆ ರಜಾ ಕಾಲದಲ್ಲಿ ಸುಮಾರು 2.5ಲಕ್ಷ ರೂ.ಖರ್ಚುಭರಿಸಿ ಶಾಲಾ ಕಟ್ಟಡದ ಹಂಚು ಛಾವಣಿಯನ್ನು ಸಂಪೂರ್ಣ ದುರಸ್ತಿಪಡಿಸಿ ಮಕ್ಕಳಿಗೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದ್ದು ಇದು ಎಲ್ಲರ ಮೆಚ್ಚುಗೆಗೆ ಕಾರಣವಾಯಿತು.
ಶಾಲಾ ಮುಖ್ಯ ಶಿಕ್ಷಕ ಕೇಶವ ನಾಯಕ್ ಸ್ವಾಗತಿಸಿದರು. ಗೌ.ಶಿಕ್ಷಕಿ ಶ್ರೀಮತಿ ಕಮಲಾ ವಂದಿಸಿ ,ಗೌ.ಶಿಕ್ಷಕಿ ದಿವ್ಯಾ ಕಾರ್ಯಕ್ರಮ ನಿರೂಪಿಸಿದರು.
