ಬಂಟ್ವಾಳ : ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೂ ದೇವಾಡಿಗ ಸಮಾಜಕ್ಕೂ ತಾಯಿ ಮಕ್ಕಳ ಸಂಬಂಧವಿದ್ದು, ಪೂರ್ವಜರ ಕಾಲದಿಂದಲೂ ಪೊಳಲಿ ದೇವಸ್ಥಾನದಲ್ಲಿ ಶ್ರೀ ದೇವಿಯ ರಥ ಕಟ್ಟುವ ಸೇವೆಯನ್ನು ಶ್ರದ್ಧಾ ಭಕ್ತಿ, ನಿಷ್ಠೆಯಿಂದ ಸಮಾಜ ಬಾಂಧವರು ನಡೆಸಿಕೊಂಡು ಬರುತ್ತಿದ್ದರು ಸಮಸ್ತ ದೇವಾಡಿಗ ಸಮಾಜ ಬಾಂಧವರ ವತಿಯಿಂದ ಶ್ರೀ ದೇವಿಗೆ ಷಷ್ಠಿ ರಥ ಸಮರ್ಪಣೆಯ ಸಮಾಲೋಚನಾ ಸಭೆಯನ್ನು ಮೇ ೧೯ರಂದು ನಡೆಸಲಾಗಿದೆ ಎಂದು ದೇವಾಡಿಗ ಸಮಾಜದ ಶ್ರೀ ಪೊಳಲಿ ಷಷ್ಠಿರಥ ಸಮರ್ಪಣಾ ಸಮಿತಿಯ ಅಧ್ಯಕ್ಷ ರಾಮದಾಸ್ ಬಂಟ್ವಾಳ ತಿಳಿಸಿದ್ದಾರೆ.
ಬಂಟ್ವಾಳ ಪ್ರೆಸ್ಕ್ಲಬ್ನಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು ೪೦ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ದೇವರ ಷಷ್ಠಿ ರಥವನ್ನು ಉದ್ದೇಶಿಸಲಾಗಿದೆ ಎಂದರು. ಹಿಂದೆ ಇದ್ದ ಷಷ್ಠಿ ರಥವು ತುಂಬಾ ಹಳೆಯದಾದ ಕಾರಣ ನಮ್ಮ ಮನವಿಯ ಮೇರೆಗೆ ಎಪ್ರಿಲ್ ೨೮ರಂದು ನೂತನ ರಥ ನಿರ್ಮಾಣಕ್ಕೆ ಪೊಳಲಿ ಕ್ಷೇತ್ರದಿಂದ ಅನುಮತಿಯೂ ದೊರೆತಿದೆ ಎಂದು ವಿವರಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತುಂಬೆ ಮಾತನಾಡಿ , ದೇಶ-ವಿದೇಶಗಳಿಂದ ದೇವಾಡಿಗ ಸಮಾಜದವರು “ದೇವಾಡಿಗರ ನಡೆ ಶ್ರೀ ಪೊಳಲಿಯೆಡೆ” ಎಂಬ ಧ್ಯೇಯವಾಕ್ಯದೊಂದಿಗೆ ಈ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಂದು ಬೆಳಿಗ್ಗೆ ಶ್ರೀ ಕ್ಷೇತ್ರದಲ್ಲಿ ಸಾವಿರಾರು ಭಕ್ತಾದಿಗಳು ಸೇರಿ ಪ್ರಾರ್ಥನೆ ನಡೆಯಲಿದ್ದು, ನಂತರ ಸರ್ವಮಂಗಳ ಸಭಾಭವನದಲ್ಲಿ ಸಮಸ್ತ ದೇವಾಡಿಗ ಬಾಂದವರ ಸಮಾಲೋಚನಾ ಸಭೆ ನಡೆಯುವುದು, ಪೊಳಲಿ ದೇವಾಲಯದ ಆಡಳಿತ ಮೊಕ್ತೇಸರರು, ತಂತ್ರಿಗಳು, ಅರ್ಚಕರು, ಶಾಸಕರು ಈಸಮಾಲೋಚನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕೋಶಾಧಿಕಾರಿ ನಾಗೇಶ್ ದೇವಾಡಿಗ, ಕೈರಂಗಳ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ ದೇವಾಡಿಗ, ಪ್ರಶಾಂತ್ ದೇವಾಡಿಗ, ಮುರಳಿ ದೇವಾಡಿಗ, ನಾಗೇಶ್ ದೇವಾಡಿಗ ಉಪಸ್ಥಿತರಿದ್ದರು.
