ಮೂಡುಬಿದಿರೆ: ದೇವಸ್ಥಾನಗಳಲ್ಲಿ ನಡೆಯುವ ಬ್ರಹ್ಮಕಲಾಶಾಭಿಷೇಕದಿಂದ ಕ್ಷೇತ್ರದ ಸಾನಿಧ್ಯ ವೃದ್ಧಿಯಾಗಿ ಊರು ಸುಭೀಕ್ಷಾವಾಗಿದೆ ಎಂದು ಆಲಂಗಾರು ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಈಶ್ವರ ಭಟ್ ಹೇಳಿದರು.
ಇರುವೈಲು ಶ್ರೀದುರ್ಗಾಪರಮೇಶ್ವರಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬುಧವಾರ ಸಂಜೆ ಧಾರ್ಮಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಎಲಿಯಾ ದರ್ಗಾ ಶರೀಫ್ ಮಸೀದಿಯ ಧರ್ಮಗುರು ಬಿ.ಕೆ ಅಲ್ತಾಫ್ ಮುಸ್ಲಿಯಾರ್ ಮುಖ್ಯ ಅತಿಥಿಯಾಗಿ ಮಾತನಾಡಿ ಇರುವೈಲು ಸಾಮರಸ್ಯ ಸೌಹಾರ್ದತೆಯ ಊರು. ಬೇರೆ ಬೇರೆ ಹೆಸರುಗಳಿಂದ ನಾವು ಆರಾಧಿಸುವ ದೇವರುಗಳು ಒಂದೇ. ಆದರೆ ನಾವು ನಮ್ಮ ನಮ್ಮ ತತ್ವದ ಆಧಾರದ ಮೇಲೆ ಆಚರಣೆಗಳನ್ನು ಮಾಡುತ್ತೇವೆಂದು ಹೇಳಿದ ಅವರು ಬ್ರಹ್ಮಕಲಶದಿಂದ ಊರಿಗೆ ಮಂಗಳವಾಗಲಿ ಎಂದು ಶುಭ ಹಾರೈಸಿದರು.
ಸನ್ಮಾನ : ಕ್ಷೇತ್ರದ ದೇವರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಹಿರಿಯರಾದ ಅಣ್ಣಿ ದೇವಾಡಿಗ ದಂಬೆದಕೋಡಿ, ಸಂಕಪ್ಪ ಸಾಲ್ಯಾನ್ ದೇವರಗುಡ್ಡೆ, ಶೀನ ನಾೈಕ್ ಕೊಲ್ಲೊಟ್ಟು ಅವರನ್ನು ಸನ್ಮಾನಿಸಲಾಯಿತು.
ಹೊಸಬೆಟ್ಟು ಚರ್ಚಿನ ಧರ್ಮಗುರು ರೇ.ಫಾ ಸಂತೋಷ್ ರೊಡ್ರಿಗಸ್, ಮಸ್ಜಿದುರಹ್ಮಾನ್ ಜುಮ್ಮಾ ಮಸೀದಿ ಬಾರ್ದಿಲ ಇಲ್ಲಿನ ಖಾಸಿಂ ಮದನಿ, ಡಿ.ಎ ಉಸ್ಮಾನ್, ಮೂಡುಬಿದಿರೆ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನಗಳ ಆಡಳಿತ ಮೊಕ್ತೇಸರ ಉಮೇಶ್ ಪೈ, ಎಂಸಿಎಸ್ ಬ್ಯಾಂಕಿನ ಚಂದ್ರಶೇಖರ್, ಉದ್ಯಮಿ ನಯಾಬ್ ಹಾಜಿ ಸೂರಲ್ಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪೂವಪ್ಪ ಸಾಲ್ಯಾನ್ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ ಅತಿಥಿಗಳನ್ನು ಗೌರವಿಸಿದರು. ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


