ಬಾಗಲಕೋಟೆ: ಸೂರ್ಯ ನೆತ್ತಿಯ ಮೇಲೆ ಧಗಧಗಿಸುತ್ತಿರುವಂತೆ ಜಿಲ್ಲೆಯಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದೆ, ಮೋಡ ಆವರಿಸಿ ಬಿಸಿ ಹೆಚ್ಚಾಗಿರುವುದರಿಂದ ಬೇಸಿಗೆ ತಾಪ ಶುರುವಾಗಿದೆ.
ಸಾಮಾನ್ಯವಾಗಿ ಮುಳುಗಡೆ ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ ಏಪ್ರಿಲ್ ಎರಡನೇ ವಾರದಲ್ಲಿ ಹೆಚ್ಚಾಗುತ್ತದೆ. ಹವಾಮಾನ ವೈಪರೀತ್ಯದಿಂದಾಗಿ ಮಾರ್ಚ್ನಲ್ಲೇ ಬೇಸಿಗೆ ಆರಂಭಗೊಂಡಿದ್ದು ರಸ್ತೆಗಳು ಕಾಯ್ದು ನಿಗಿ ನಿಗಿ ಕೆಂಡದಂತಾಗುತ್ತಿವೆ. ಉಷ್ಣಾಂಶದಿಂದ ಬಳಲಿ ಆಯಾಸಗೊಂಡ ಜನ ಕೂಲ್ ಆಗಲು ಉಪಾಯಗಳನ್ನು ಹುಡುಕುತ್ತಿದ್ದಾರೆ.
ಜಿಲ್ಲಾದ್ಯಂತ ಈ ವರ್ಷ ಉಷ್ಣಾಂಶ ಹೆಚ್ಚಾಗಿದ್ದು ವಾರದ ಅವಧಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಾಗಿದೆ. ತಾಪಮಾನ ಇನ್ನೂ ಹೆಚ್ಚಾಗಲಿದ್ದು ಏಪ್ರಿಲ್ ಮೊದಲ ವಾರದಲ್ಲಿ ಅತ್ಯಧಿಕ 40 ಡಿಗ್ರಿ ಸೆಲ್ಸಿಯಸ್ ತಲುಪಲಿದೆ. ಸ್ಥಿತಿ ಹೀಗೆ ಮುಂದುವರಿದರೆ ಈ ಬಾರಿ 43 ಡಿಗ್ರಿವರೆಗೆ ಉಷ್ಣಾಂಶ ದಾಖಲಾದರೆ ಅಚ್ಚರಿ ಪಡಬೇಕಿಲ್ಲ. ಇತ್ತೀಚೆಗೆ ಜಿಲ್ಲೆಯ ಸಾವಳಗಿ ಭಾಗದಲ್ಲಿ ಅಕಾಲಿಕ ಮಳೆ ಸುರಿದಿದ್ದು ಬಿಟ್ಟರೆ ಉಳಿದ ಪ್ರದೇಶಗಳಲ್ಲಿ ಮಳೆ ಸುಳಿದಿಲ್ಲ. ತುಂತುರು ಮಳೆ ಬಿಟ್ಟರೆ ಭೂಮಿ ತಂಪಾಗಿಸುವಷ್ಟು ವರ್ಷಧಾರೆಯಾಗಿಲ್ಲ. ಪರಿಣಾಮ ಉಷ್ಣಾಂಶದ ಬಿಸಿಯಿಂದ ಜನರು ಬಳಲುತ್ತಿದ್ದಾರೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಣ್ಣಿಗೆ ರಾಚುವಷ್ಟು ಬಿಸಿಲು ಆವರಿಸುತ್ತಿದ್ದು, ಅಪರಾಹ್ನದಲ್ಲಿ ರಸ್ತೆಗಳ ಮೇಲೆ ಜನರು ಕಾಣುವುದಿಲ್ಲ. ಬಿಸಿಲಿನಿಂದಾಗಿ ಮಧ್ಯಾಹ್ನದ ಹೊತ್ತಿನಲ್ಲಿ ಬಾಗಲಕೋಟದಲ್ಲಿ ಅಂಗಡಿ, ಮುಂಗಟ್ಟುಗಳ ಬಾಗಿಲು ಮುಚ್ಚಿರುತ್ತವೆ. ಸಂಜೆ 4 ಗಂಟೆಯ ನಂತರ ಬಿಸಿಲು ಕಡಿಮೆಯಾಗುತ್ತಿದ್ದಂತೆ ವ್ಯಾಪಾರ, ವಹಿವಾಟು ಕುದುರುತ್ತದೆ. ಏಪ್ರಿಲ್ನಲ್ಲಿ ಮದುವೆ ಸೇರಿದಂತೆ ಶುಭ ಸಮಾರಂಭಗಳ ಮುಹೂರ್ತಗಳಿದ್ದು, ಬಟ್ಟೆ ಹಾಗೂ ನಾನಾ ವಸ್ತುಗಳ ಖರೀದಿಗಾಗಿ ಜನರು ಮನೆಗಳಿಂದ ಸಂಜೆ ಹೊರಬೀಳುತ್ತಿದ್ದಾರೆ. ಮಧ್ಯಾಹ್ನ ಹಾಗೂ ಸಂಜೆ ಆವರಿಸುವ ಬಿಸಿಲು ರಾತ್ರಿ ಕೂಡ ಧಗೆಗೆ ಕಾರಣವಾಗುತ್ತಿದೆ. ಸೆಕೆಯಿಂದ ತತ್ತರಿಸಿದ ಜನರು ಮಾಳಿಗೆಗಳ ಮೇಲೆ ಮಲಗಿ ಸ್ವಲ್ಪ ತಂಪು ವಾತಾವರಣ ಸವಿಯುವ ಉಮೇದಿಯಲ್ಲಿದ್ದಾರೆ.
ಬಿಸಿಲು ಆರಂಭವಾಗುತ್ತಿದ್ದಂತೆ ಜಿಲ್ಲಾ ಕೇಂದ್ರ ಬಾಗಲಕೋಟದಲ್ಲಿ ತಂಪು ಪಾನೀಯಗಳ ಮಾರಾಟ ಜೋರಾಗಿದೆ. ಆರೋಗ್ಯದ ದೃಷ್ಟಿಯಿಂದ ಬಹುತೇಕ ಜನರು ಎಳನೀರು ಅರಸಿ ಅಂಗಡಿಗಳಿಗೆ ಹೋಗುತ್ತಿದ್ದಾರೆ. ತಂಪಾದ ಲಸ್ಸಿ, ಮಜ್ಜಿಗೆಯ ಮಾರಾಟ ಹೆಚ್ಚಾಗಿದೆ.ಇನ್ನು ಬೇಸಿಗೆಯ ಕಾರಣದಿಂದಾಗಿ ತಂಪಾದ ಕುಡಿವ ನೀರಿನ ಪ್ಯಾಕೇಜ್ಡ್ ಬಾಟಲ್ಗಳ ಮಾರಾಟ ಸುಧಾರಿಸಿದೆ. ಸರಕಾರದಿಂದ ಎಲ್ಲೆಡೆ ಸ್ಥಾಪಿಸಲಾಗಿರುವ ಶುದ್ಧ ಕುಡಿವ ನೀರಿನ ಘಟಕಗಳಿಗೂ ನೀರಿಗಾಗಿ ಜನ ಮುಗಿ ಬೀಳುತ್ತಿದ್ದಾರೆ. ಮಧ್ಯಾಹ್ನ ಬಾಗಲಕೋಟದ ಸಿಮೆಂಟ್ ಕ್ವಾರಿ ಪ್ರದೇಶದಲ್ಲಿ ಸಂಚರಿಸುವ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಇಲ್ಲವೇ ಕ್ಯಾಪ್ ಧರಿಸುತ್ತಿದ್ದಾರೆ. ಇನ್ನು ಮಹಿಳೆಯರು ಕೊಡೆ, ಸ್ಕಾರ್ಫ್ಗಳ ಮೊರೆ ಹೋಗಿದ್ದಾರೆ. ಕಬ್ಬಿನ ಹಾಲು, ಕಲ್ಲಂಗಡಿ, ದ್ರಾಕ್ಷಿ ಸೇರಿದಂತೆ ಹಣ್ಣುಗಳ ಮಾರಾಟವೂ ವೇಗ ಕಂಡಿದೆ. ಬಿಸಿಲಿನಿಂದ ಪಾರಾಗಲು ಹಲವಾರು ಐಡಿಯಾ ಮಾಡುತ್ತಿರುವ ಜನರು ಇನ್ನೂ ಎರಡು ತಿಂಗಳು ಹೆಚ್ಚಿನ ಉಷ್ಣಾಂಶ ಸಹಿಸುವುದಂತೂ ಅನಿವಾರ್ಯ.

