ಕಟೀಲು:ಮನ ಮನಗಳಲ್ಲಿ ಮನೆ ಮನೆಗಳಲ್ಲಿ ಬ್ಯಾಂಕ್ನ ಮಹತ್ವ ತಿಳಿಸಬೇಕು. ಗ್ರಾಹಕರ ಉಳಿತಾಯ ಹಾಗೂ ಗಳಿಕೆಯ ಪ್ರವೃತ್ತಿ ಹೆಚ್ಚಾದಾಗ ದೇಶ ಆರ್ಥಿಕ ಪ್ರಗತಿ ಹೊಂದುತ್ತದೆ. ಎಂದು ಕರ್ಣಾಟಕ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚೀಫ್ ಎಕ್ಸಿಕ್ಯೂಟೀವ್ ಮಹಾಬಲೇಶ್ವರ ಭಟ್ ಹೇಳಿದರು. ಅಜಾರು ಕಟೀಲು ಡಿ.ಎಸ್. ಎಮ್. ಆಸ್ಪತ್ರೆ ಕಟ್ಟಡದಲ್ಲಿ ಕರ್ಣಾಟಕ ಬ್ಯಾಂಕ್ ನ 839 ನೇ ಶಾಖೆ (ನಡುಗೋಡು- ಕಟೀಲು) ಉದ್ಘಾಟಿಸಿ ಮಾತನಾಡಿ ಮುಂದಿನ 2024 ಇಸವಿಯಲ್ಲಿ ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಆಚರಣೆ ಹೊತ್ತಿಗೆ 1000 ಶಾಖೆಗಳನ್ನು ಹೊಂದಿರಬೇಕೆಂಬ ಗುರಿ ಹೊಂದಿದ್ದೇವೆ. ಕರ್ಣಾಟಕ ಬ್ಯಾಂಕ್ ನ 838 ಶಾಖೆಗಳಲ್ಲಿ ಭಾರತದಾಂತ್ಯಂತ 1 ಕೋಟಿಗೂ ಮಿಕ್ಕಿ ಗ್ರಾಹಕರು ಇದ್ದು, ಬ್ಯಾಂಕ್ನ ಶತಮಾನೋತ್ಸವ ಸಂದರ್ಭ ಭಾರತದ ಜನಸಂಖ್ಯೆಯ ಶೇಕಡ ಒಂದರಷ್ಟು ಗ್ರಾಹಕರನ್ನು ಹೊಂದುವ ಗುರಿ ಹೊಂದಿದ್ದೇವೆ.
ನಮ್ಮ ಬ್ಯಾಂಕ್ 1ಲಕ್ಷ 18 ಸಾವಿರ ಕೋಟಿ ವ್ಯವಹಾರ ನಡೆಸುತ್ತಿದ್ದು, 2024 ರ ಹೊತ್ತಿಗೆ 3 ಲಕ್ಷ ಕೋಟಿ ರೂಪಾಯಿಗೆ ತಲುಪಿಸಬೇಕು ಎಂಬ ಗುರಿ ಇದೆ. ಕಟೀಲು ದೇವಳದ ಅನುವಂಶಿಕ ಟ್ರಸ್ಟಿ ಮತ್ತು ಅನುವಂಶಿಕ ಅರ್ಚಕ ಕೆ ವಾಸುದೇವ ಆಸ್ರಣ್ಣ ದೀಪ ಪ್ರಜ್ವಲನೆ ಮಾಡಿ ಕರ್ಣಾಟಕ ಬ್ಯಾಂಕ್ ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆ ನೀಡಿದೆ ಎಂದರು.
ಕಟೀಲು ದೇವಳ ಅರ್ಚಕರಾದ ಲಕ್ಷೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕೆ.ಎಸ್ ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ ಶುಭಾಶಂಸನೆಗೈದರು.ಮುಂಬಯಿ ಸಂಜೀವಿನಿ ಹಾಸ್ಪಿಟಲ್ನ ಡಾ.ಸುರೇಶ್ ಸಂಜೀವ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಗಳೂರು ವಲಯದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಮೇಶ್ ಭಟ್ ಸ್ವಾಗತಿಸಿದರು. ಕಟೀಲು ಶಾಖಾ ಪ್ರಬಂಧಕ ಮಿಥುನ್ ವಂದಿಸಿದರು. ಆಶಾ ಕಾರ್ಯಕ್ರಮ ನಿರೂಪಿಸಿದರು.



