ಪೊಳಲಿ: ಲಕ್ಷಾಂತರ ಮಂದಿ ಸೇರುವ ಕಾರ್ಯಕ್ರಮದಲ್ಲಿ ಗೊಂದಲವಾಗುವುದು ಸಹಜ. ಆದರೆ ಪೊಳಲಿ ಬ್ರಹ್ಮಕಲಶೋತ್ಸವವು ಯಾವುದೇ ಅಡಚಣೆ ಇಲ್ಲದಂತೆ ಅಚ್ಚುಕಟ್ಟಾಗಿ ಮೂಡಿಬಂದಿದೆ. ಎಲ್ಲರೂ ಸೇವೆ ಎಂಬ ಧ್ಯೇಯದೊಂದಿಗೆ ಕೆಲಸ ಮಾಡಿದ್ದರಿಂದ ಈ ಕೆಲಸದ ಯಶಸ್ಸನ್ನು ಕೇವಲ ದೇವರಿಗೆ ವಹಿಸಿಕೊಟ್ಟಿದ್ದಾರೆಯೇ ಹೊರತು ಯಾರೂ ಇದರ ಕ್ರೆಡಿಟ್ ಪಡೆದುಕೊಂಡಿಲ್ಲ. ಬ್ರಹ್ಮಕಲಶೋತ್ಸವದ ಜವಾಬ್ದಾರಿ ವಹಿಸಿಕೊಂಡ ನೇತಾರರೇ ಯಾವುದೇ ಹಮ್ಮಿಲ್ಲದೆ ಸೇವೆ ಎಂಬ ನಿಟ್ಟಿನಲ್ಲಿ ಕೆಲಸ ಮಾಡಿ ಸಾಥ್ರ್ಯಕ್ಯ ಪಡೆದಿದ್ದಾರೆ.
ಕಾರ್ಯಕ್ರಮದ ಹೈಲೆಟ್ಸ್ ಇಲ್ಲಿದೆ.
ಸಂಚಾರ ವ್ಯವಸ್ಥೆ:
ಬ್ರಹ್ಮಕಲಶೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಬಸ್ನವರಿಂದ ಉಚಿತ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಲವಾರು ರಿಕ್ಷಾ-ಟೆಂಪೋ ಮುಂತಾದ ವಾಹನ ಮಾಲಕರು ಉಚಿತವಾಗಿ ಪ್ರಯಾಣಿಕರನ್ನು ಕರೆತಂದು ದೇವಿಯ ಕೃಪೆಗೆ ಪಾತ್ರವಾಗಿದ್ದಾರೆ. ಪಾರ್ಕಿಂಗ್ ಸ್ಥಳದಿಂದ ಬರುವ ಅಶಕ್ತ ಭಕ್ತರಿಗೆ ವಾಹನಗಳಲ್ಲಿ ದೇವಸ್ಥಾನಕ್ಕೆ ಕರೆದುಕೊಂಡು ಬರಲಾಯಿತು. ಪಾರ್ಕಿಂಗ್ ಸ್ಥಳವು ವಾಹನಗಳಿಂದ ತುಂಬಿತುಳುಕಿದ್ದು, ಸ್ವಯಂಸೇವಕರು ಯಾವುದೇ ಗೊಂದಲಕ್ಕೊಳಗಾದಂತೆ ನೋಡಿಕೊಂಡರು. ಲಕ್ಷಕ್ಕಿಂತಲೂ ಅಧಿಕ ವಾಹನಗಳು ಪ್ರತಿ ದಿನ ಬಂದು ಹೋಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.
ಎಲ್ಇಡಿ ಸ್ಕ್ರೀನ್
ದೇವರ ಬ್ರಹ್ಮಕಲಶಾಭಿಷೇಕವನ್ನು ಸರ್ವಭಕ್ತರಿಗೂ ಕಣ್ತುಂಬಿಕೊಳ್ಳಲು ದೇವಸ್ಥಾನದ ಆಸುಪಾಸುಗಳಲ್ಲಿ ಏಳೆಂಟು ಎಲ್ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ದೇವಸ್ಥಾನಕ್ಕೆ ಬಂದ ಭಕ್ತರ ನಡುವೆ ನೂಕುನುಗ್ಗಲು ಉಂಟಾಗಲಿಲ್ಲ. ಲೈವ್ ಕಾರ್ಯಕ್ರಮ ಆಗಿರುವುದರಿಂದ ಕೋಟ್ಯಂತರ ಭಕ್ತರು ಮನೆಯಲ್ಲೇ ಕುಳಿತು ಮೊಬೈಲ್, ಟಿವಿಗಳಲ್ಲಿ ಬ್ರಹ್ಮಕಲಶಾಭಿಷೇಕನ್ನು ನೋಡಿದರು,
ಮಜ್ಜಿಗೆ ವ್ಯವಸ್ಥೆ: ಸರತಿ ಸಾಲಿನಲ್ಲಿ ಬರುವ ಭಕ್ತರ ನೀರಡಿಕೆ ನೀಗಿಸಲು, ದಣಿವಾರಿಸಲು ಅಲ್ಲಲ್ಲಿ ತಂಪಾದ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.
4-5 ಲಕ್ಷ ಜನ ನಿರೀಕ್ಷೆ
ಬ್ರಹ್ಮಕಲಶಾಭಿಷೇಕದ ದಿನವಾದ ನಿನ್ನೆ ಬೆಳಗ್ಗಿನಿಂದ ರಾತ್ರಿ ತನಕ ಸುಮಾರು ನಾಲ್ಕರಿಂದ ಐದು ಲಕ್ಷ ಜನರು ಆಗಮಿಸಿರುವ ಬಗ್ಗೆ ನಿರೀಕ್ಷೆ ವ್ಯಕ್ತವಾಗಿದೆ. ಬ್ರಹ್ಮಲಶೋತ್ಸವದ ಹತ್ತು ದಿನಗಳ ಕಾಲವೂ ಭಕ್ತಜನರಿಗೆ ಶುಚಿ-ರುಚಿಯಾದ ಭೋಜನ-ಉಪಹಾರ ವ್ಯವಸ್ಥೆ ಕಲ್ಪಿಸಿರುವುದು ಹೊಸ ದಾಖಲೆ ಸೃಷ್ಟಿಯಾದಂತಾಗಿದೆ.
ಸ್ವಚ್ಛತೆ
ಲಕ್ಷಾಂತರ ಮಂದಿ ಸೇರುವಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಕಷ್ಟ. ಆದರೆ ಸ್ವಯಂಸೇವಕರು ತ್ಯಾಜ್ಯಗಳನ್ನು ಸಂಗ್ರಹಿಸಿ ಸಾಗಿಸಿ ಪೊಳಲಿಯ ಸ್ವಚ್ಛತೆಗೆ ಒಂದಿಂಚೂ ಕುಂದಾಗದಂತೆ ಕೆಲಸ ಮಾಡಿ ಕಾರ್ಯಕ್ರಮದ ಯಶಸ್ವಿಗೆ ಪಾತ್ರರಾಗಿದ್ದಾರೆ.
ಅಡುಗೆಯವರಿಂದ ಉಚಿತ ಸೇವೆಮಾ.12 ಹಾಗೂ 13ರಂದು ಅಡುಗೆಯವರು ಯಾವುದೇ ಶುಲ್ಕ ತೆಗೆದುಕೊಳ್ಳದೆ ಅಡುಗೆ ತಯಾರಿಸಿದ್ದರು. ಲಕ್ಷಾಂತರ ಮಂದಿಗೆ ಕೊರತೆಯಾಗದಂತೆ ಶುಚಿ-ರುಚಿಯಾದ ಅಡುಗೆ ಬಡಿಸಿದ ಕೀರ್ತಿಗೆ ಇವರು ಪಾತ್ರರಾಹಿದ್ದಾರೆ
ಮಾ.14 ರಾತ್ರಿ ಧ್ವಜಾರೋಹಣ: ಒಂದು ತಿಂಗಳ ಜಾತ್ರೆಗೆ ಚಾಲನೆ
ಪೊಳಲಿ: ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ಹಾಗೂ ರಾಜರಾಜೇಶ್ವರಿ ಅಮ್ಮನವರಿಗೆ ಬ್ರಹ್ಮಕಲಶಾಭಿಷೇಕ ಮುಗಿದ ಬಳಿಕ ಗುರುವಾರ ರಾತ್ರಿ ಧ್ವಜಾರೋಹಣ ನಡೆಯಲಿದೆ. ಕಳೆದ ಬಾರಿ ಶ್ರೀಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯಗಳು ದೇವಸ್ಥಾನವನ್ನು ತೆರವುಗೊಳಿಸಿದ್ದರಿಂದ ಸಂಪೂರ್ಣ ಅವದಿಯ ಜಾತ್ರಾ ಮಹೋತ್ಸವ ನಡೆಯದೆ ಕೇವಲ 7 ದಿನಗಳ ಕಾಲ ಸಾಂಕೇತಿಕ ಜಾತ್ರಾಮಹೋತ್ಸವ ನಡೆಸಲಾಗಿತ್ತು. ಈ ಬಾರಿ ಬ್ರಹ್ಮಕಲಶೋತ್ಸವವು ನಡೆದಿರುವುದರಿಂದ ಜಾತ್ರಾ ಮಹೋತ್ಸವವು ಅತಿವೈಭವದಿಂದ ಜರಗಲಿದೆ. ಶುಕ್ರವಾರ ಬೆಳಿಗ್ಗೆ ಕುದಿ ಕರೆದ ನಂತರ ಒಂದು ತಿಂಗಳ ಜಾತ್ರೆಯ ದಿನ ಗೊತ್ತಾಗಲಿದೆ.


![DSC_0102 [Desktop Resolution]](http://www.suddi9.com/wp-content/uploads/2019/03/DSC_0102-Desktop-Resolution-650x432.jpg)
![DSC_4158 [Desktop Resolution]](http://www.suddi9.com/wp-content/uploads/2019/03/DSC_4158-Desktop-Resolution-650x434.jpg)


![ADS_5221 [Desktop Resolution]](http://www.suddi9.com/wp-content/uploads/2019/03/ADS_5221-Desktop-Resolution-650x434.jpg)