ಕೈ
ಕಂಬ:ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಲು ದೇವಸ್ಥಾನಗಳೇ ಮುಖ್ಯ ಕಾರಣ. ಪೊಳಲಿಯ ಮಾತೆಯ ದಿವ್ಯ ಸಾನಿಧ್ಯ ನವೀಕರಣಗೊಂಡು ಬ್ರಹ್ಮಕಲಶೋತ್ಸವ ನಡೆಯುತ್ತಿರುವುದು ಅತ್ಯಂತ ಖುಷಿಯ ವಿಚಾರವಾಗಿದೆ. ದೇವಿಯ ಸಾನಿಧ್ಯಕ್ಕೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಅವರಲ್ಲಿ ಧಾರ್ಮಿಕತೆ-ಉತ್ತಮ ಸಂಸ್ಕಾರ ಮೂಡಲು ಸಾಧ್ಯವಾಗುತ್ತದೆ. ಸರ್ವರಿಗೂ ದೇವಿಯ ಅನುಗ್ರಹ ಸಿಗುವಂತಾಗಲಿ. ದೇವಿಯನ್ನು ಭಕ್ತಿಯಿಂದ ನೆನೆಯೋಣ ಎಂದು ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಅಭಿಪ್ರಾಯಿಸಿದರು.

ಅವರು ಮಾ.5ರಂದು ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಎರಡನೇ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.
ಧಾರ್ಮಿಕ ಉಪನ್ಯಾಸಗೈದ ವಿಶ್ವಹಿಂದೂ ಪರಿಷತ್ನ ಪ್ರಾಂತ್ಯ ಕಾರ್ಯಾಧ್ಯಕ್ಷ ಎಂ.ಬಿ ಪುರಾಣಿಕ್, ಇಂದು ಹಲವಾರು ದೇವಸ್ಥಾನಗಳು ಜೀರ್ಣೋದ್ಧಾರಗೊಳ್ಳುತ್ತಿದ್ದು, ಜನರಲ್ಲಿ ಧಾರ್ಮಿಕ ಪ್ರಜ್ಞೆ ಹೆಚ್ಚುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಪೊಳಲಿಯಲ್ಲಿ ಮಾತೆಯ ದಿವ್ಯ ಶಕ್ತಿ ಇದ್ದು, ಆಕೆಯ ಅನುಗ್ರಹದಿಂದಲೇ ಇಂದು ಇಷ್ಟು ದೊಡ್ಡ ದೇವಸ್ಥಾನ ಪುನರ್ನಿರ್ಮಾಣಗೊಳ್ಳಲು ಸಾಧ್ಯವಾಗಿದೆ ಎಂದು ನುಡಿದರು.
. ಸಭಾಧ್ಯಕ್ಷತೆ ವಹಿಸಿದ್ದ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ ಮಾತನಾಡಿ, ಪೊಳಲಿ ಮಾತೆಯ ದಯೆಯಿಂದ ನಮಗೆಲ್ಲ ಬ್ರಹ್ಮಕಲಶೋತ್ಸವ ನೋಡುವ ಭಾಗ್ಯ ಸಿಕ್ಕಿದೆ. ದೇವಿಯ ಅನುಗ್ರಹ ಎಲ್ಲರಿಗೂ ಸಿಗಲಿ ಎಂದು ಹಾರೈಸಿದರು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಿವಾಸ ರಾವ್, ಕೊಟ್ಟಾರಿ ಸಮಾಜದ ಅಧ್ಯಕ್ಷ ಬಾಲಕೃಷ್ಣ ಕೊಟ್ಟಾರಿ, ಚಿರುಂಭ ಭಗವತೀ ಕ್ಷೇತ್ರ ಅಧ್ಯಕ್ಷ ಉಳ್ಳಾಲ ಚಂದ್ರಹಾಸ ಉಳ್ಳಾಲ್, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ, .ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಡಾ| ಎ. ರಾಮಕೃಷ್ಣ ಶೆಟ್ಟಿ ಅಮ್ಮುಂಜೆಗುತ್ತು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಮಾನಾಥ ರೈ, ಮೊಕ್ತೇಸರುಗಳಾದ ಯು. ತಾರಾನಾಥ ಆಳ್ವ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉಳಿಪಾಡಿಗುತ್ತು ರಾಜೇಶ್ ನಾಯಕ್, ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆ ಗುತ್ತು, ಬಂಟ್ವಾಳ ತಾ.ಪಂ. ಸದಸ್ಯ ಯಶವಂತ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಆಳ್ವಾಸ್ನ ಕನ್ನಡ ಪ್ರಾಧ್ಯಾಪಕ ಡಿ.ಎನ್. ಖಂಡಿಗೆ ನಿರ್ವಹಿಸಿದರು.
ಗುತ್ತಿಗೆದಾರ ಮಹಾಬಲ ಶೆಟ್ಟಿ, ಕಾಷ್ಠ ಶಿಲ್ಪಿ ಗಣೇಶ್ ಆಚಾರ್ಯ, ಗೋವರ್ಧನ್ ಮೆಟಲ್ಸ್ ಮಂಗಳೂರು ಇದರ ಶಿವಪ್ರಸಾದ್, ಕಾಷ್ಠ ಶಿಲ್ಪಿ ಲಕ್ಷ್ಣಣ್ ಶರ್ಮ, ಸುರಭಿ ಫ್ಯಾಬ್ರಿಕೇಶನ್ಸ್ ವಕ್ರ್ಸ್ ಇದರ ನವೀನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.



