ಬಂಟ್ವಾಳ : ‘ಕಲೆಯಲ್ಲಿ ಕಲೆಯ ಅಂಶ ಪ್ರಧಾನವಾಗಿರಬೇಕೇ ಹೊರತು ಆಡಂಬರವಲ್ಲ’ ಎಂದು ಹಂಪಿ ವಿಶ್ವವಿದ್ಯಾನಿಲಯ ನಿವೃತ್ತ ಕುಲಪತಿ ಬಿ.ಎ. ವಿವೇಕ ರೈ ಹೇಳಿದ್ದಾರೆ. ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಏರ್ಯಬೀಡುವಿನಲ್ಲಿ ರವಿವಾರ ನಡೆದ ದೈವಾರಾಧಕರ ಸಮಾವೇಶದಲ್ಲಿ ದಿಕ್ಸೂಚಿ ಭಾಷಣಗೈದ ಅವರು ಹಿರಿಯರ ಕಾಲದಿಂದಲೂ ನಡೆದುಕೊಂಡು ಬರು ತ್ತಿದ್ದ ಆರಾಧನಾ ಕಲೆ ಕಲಾವಿದರಿಂದ ಉಳಿದುಕೊಂಡಿದೆ ಎಂದರು. ನಂಬಿಕೆಗೆ ಇಂಬು ನೀಡುವುದೇ ದೈವಾರಾಧನೆ , ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ದೈವಾರಾಧನೆಯ ವಿಧಾನದಲ್ಲೂ ವೈಭವೀಕರಣವೇ ಅತಿಯಾಗಿದ್ದು, ಹೀಗಾದಾಗ ಕಲೆಯ ಮಹತ್ವ ಕಡಿಮೆಯಾಗುತ್ತದೆ ಎಂದ ಅವರು, ಪರಂಪರಾಗತವಾಗಿ ಬೆಳೆದುಬಂದಿರುವ ದೈವಾರಾಧನೆಯ ಕಲೆಗೆ ಚ್ಯುತಿಯಾಗದಂತೆ ಉಳಿಸುವ ಕೆಲಸ ಅಗಬೇಕು ಎಂದರು. ಸಮಾವೇಶ ವನ್ನು ಅರುವ (ವೇಣೂರು) ಅರಸ ಡಾ. ಪದ್ಮರಾಜ ಅಜಿಲರು ಪಂಚ ದೀವಿಟಿಕೆಯನ್ನು ಉರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಯಾವುದೆ ಮತಬೇಧ ಇಲ್ಲದೆ ಸೌಹಾರ್ದಯುತವಾಗಿ ಜೀವನವನ್ನು ನಡೆಸುವಲ್ಲ್ಲಿದೈವಾರಾಧನೆ ವಿಶೇಷ ಪಾತ್ರ ವಹಿಸುತ್ತದೆ ಎಂದರು.

ಮೇಲು-ಕೀಳು ಇಲ್ಲ: ಏರ್ಯ
ಸಮಾವೇಶದ ಸಂಘಟಕ,ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮಿನಾರಾಯಣ ಆಳ್ವ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ದೈವಾರಾಧನೆ ಹಾಸ್ಯಕ್ಕೆ ಒಳಗಾಗದಂತೆ,ಪರಂಪರೆಯನ್ನು ಉಳಿಸಿಕೊಂಡು ಶೃದ್ದಾಭಕ್ತಿಯಿಂದ ನಡೆದುಕೊಂಡು ಹೋಗುವಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದೈವಾರಾಧಕರ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು. ಗಡಿ ಹಿಡಿಯುವವರಿಂದ ನುಡಿನುಡಿಯುವವರ ತನಕ ಎಲ್ಲಾ ಸ್ಥಾನಮಾನದವರು, ಜಾತಿ ವರ್ಗದವರಿದ್ದಾರೆ . ಇಲ್ಲಿ ಮೇಲು-ಕೀಳು ಎಂಬುದು ಯಾವುದೂ ಇಲ್ಲ. ಪ್ರಪಂಚದಲ್ಲಿ ಒಂದು ಕುಟುಂಬವನ್ನು ಒಂದುಗೂಡಿಸುವುದು ದೈವಾರಾಧನೆಯಿಂದ ಮಾತ್ರ ಸಾಧ್ಯ. ಇದಕ್ಕೆ ಈ ಸಮಾವೇಶ ನಾಂದಿಯಾಗಿದ್ದು,ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಮಾವೇಶ ನಡೆಸಲಾಗುವುದುಎಂದು ತಿಳಿಸಿದರು.
ಇದೇ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ
ಡಾ| ವೀರೇಂದ್ರ ಹೆಗ್ಗಡೆಯವರ ಸಂದೇಶ ಪತ್ರವನ್ನು ಎ. ಬಾಲಕೃಷ್ಣ ವಾಚಿಸಿದರು.
ಮಿತ್ತನಡ್ಕ ಮಲರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಮುಗುಳಿ ತಿರುಮಲೇಶ್ವರ ಭಟ್, ಮುಗ ಗುತ್ತಿನ ಡಾ. ರಾಜಾರಾಂ, ಶ್ರೀ ಶಿರಾಡಿ ದೈವದ ಆಡಳಿತದಾರರಾದ ಪ್ರಕಾಶ್ ಕುಡ್ಕುಳಿ, ಬೈಕಂಪಾಡಿ ಮೊಗವೀರ ಮಹಾಸಭಾದ ಅಧ್ಯಕ್ಷ ವಾಸುದೇವ ಸಾಲ್ಯಾನ್ ಅತಿಥಿಗಳಾಗಿ ಭಾಗವಹಿಸಿದ್ದರು. ತಿಂಗಳ ಗರಡಿಯ ಆಡಳಿತ ಮೊಕ್ತೇಸರ ತಿಂಗಳ ವಿಕ್ರಮಾರ್ಜುನ ಹೆಗ್ಡೆ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದರು.
ಕಾಸರಗೋಡಿನಿಂದ ಕುಂದಾಪುರದವರೆಗಿನ ದೈವಾರಾಧಕರಾದ ಬೀಡು, ಗುತ್ತುಗಳಿಂದ ಹಿಡಿದು ದೈವಗಳಿಗೆ ಕಟ್ಟುವ ಪರವ, ಪಂಬದ, ನಲ್ಕೆ ಯಾನೇ ಪಾಣಾರವರೆಗಿನ ಎಲ್ಲ ವರ್ಗದವರ ಪ್ರಾತಿನಿಧಿಕವಾಗಿ ಮುಖ್ಯಸ್ಥರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
