ಬಂಟ್ವಾಳ: ಬಂಟ್ವಾಳ ತಾಲೂಕಿನ ಕಸಬಾ ಗ್ರಾಮದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಕಾರಣೀಕ ಸಾನಿಧ್ಯವಾದ ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರವನ್ನು ಪುನರ್ ನಿರ್ಮಿಸಲು ಸಂಕಲ್ಪಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ 8.55ರ ಮೀನಲಗ್ನ ಸುಮೂಹೂರ್ತದಲ್ಲಿ ಶಿಲಾನ್ಯಾಸ ಸಮಾರಂಭ ನೆರವೇರಿತು.
ಕನ್ಯಾಡಿ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಂನ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದರು. ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಪುರೋಹಿತರಾದ ಕೇಶವ ಶಾಂತಿ ನಾಟಿ ವೈಧಿಕ ವಿಧಿವಿಧಾನ ನೆರವೇರಿಸಿದರು. ಊರ ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಸ್ಥಾನದ ಶಿಲಾನ್ಯಾಸ ಸಮಾರಂಭದ ಪುಣ್ಯ ಕಾರ್ಯದಲ್ಲಿ ಭಾಗಿಗಳಾದರು.

ಧರ್ಮಸ್ಥಳ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ ಸುಖ ಶಾಂತಿ ನೆಮ್ಮದೀಯ ಮೂಲಾದಾರ ಯಾವುದು ಎಂದು ತಿಳಿದುಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಶ್ರದ್ಧೆ, ಭಕ್ತಿ ತ್ಯಾಗಯುಕ್ತವಾದ ಕರ್ಮ ಇದ್ದಾಗ ಮಾತ್ರ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿದೆ ಎಂದರು. ತ್ಯಾಗ, ಸತ್ಯ ಧರ್ಂ ಇದ್ದಲ್ಲಿ ದೇವರು ಇರುತ್ತಾನೆ, ಭೂಮಿಗೆ ಬಿದ್ದ ಭತ್ತ ಮತ್ತೆ ಮೊಳಕೆಯೊಡೆದು ತೆನೆ ಬಿಟ್ಟು ನೂರಾರು ಗಿಡಗಳಿಗೆ ಕಾರಣವಾಗುತ್ತದೆಓ ಅದೇ ರೀತಿ ನಮ್ಮಲ್ಲಿರುವ ಅಧಿಕಾರ, ಸಂಪತ್ತನ್ನು ಹಂಚಿಕ ಮಾಡಿದ್ದಾಗ ನಮಲ್ಲಿ ಇನ್ನಷ್ಟು ಸಂಚಯಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಅರುಣ್ ಕುಮಾರ್, ಗೌರವಾಧ್ಯಕ್ಷ ಕೇಶವ ಶಾಂತಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ, ಪ್ರಧಾನ ಕಾರ್ಯದರ್ಶಿ ನಾಗೇಶ್ ದರ್ಬೆ, ಕೋಶಾಧಿಕಾರಿ ಜಯಶಂಕರ ಕಾನ್ಸಲೆ, ಸಲಹೆಗಾರ ಸಂತೋಷ್ ಕುಮಾರ್ ಕೊಟ್ಟಿಂಜ, ಜಯಾನಂದ ಬೆಳ್ತಂಗಡಿ, ಪುರಸಭಾ ಸದಸ್ಯರಾದ ವಾಸುಪೂಜಾರಿ, ಜನಾರ್ದನ ಚೆಂಡ್ತಿಮಾರ್, ಪ್ರಮುಖರಾದ ಮಚ್ಚೇಂದ್ರ ಸಾಲ್ಯಾನ್, ಕೊರಗಪ್ಪ ಬಂಗೇರ, ವಾಮನ ಕುಲಾಲ್, ಭಾಸ್ಕರ ಅಜೆಕಲ, ಯಶವಂತಕಾರಂಬಡೆ, ಸುಮಿತ್ರ ಕಾರಂಬಡೆ, ಕೊರಗಪ್ಪ ಕೊಲಂಬೆಬೈಲು, ಕೇಶವ ಪಾಲಡ್ಕ, ಹರೀಶ್ ಸಾಲ್ಯಾನ್ ಕುದನೆ ಮತ್ತಿತರರು ಹಾಜರಿದ್ದರು
ಸುಮಾರು ಎಂಟುನೂರು ವರ್ಷಗಳ ಇತಿಹಾಸವಿರುವ ಶ್ರೀ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಕ್ಷೇತ್ರವನ್ನು ಸುಮಾರು 2.5ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಿಸಲು ಸಂಕಲ್ಪಿಸಲಾಗಿದೆ. ಬಂಟ್ವಾಳ ಕಸಬಾ ಗ್ರಾಮದ ಕಾರಂಬಡೆ ಎಂಬಲ್ಲಿ ಪ್ರಕೃತಿ ರಮಣೀಯ ಹಚ್ಚಹಸಿರ ಸುಂದರ ಪರಿಸರದಲ್ಲಿರುವ ಶ್ರೀ ಕ್ಷೇತ್ರವು ಭಕ್ತಜನತೆಯ ಇಷ್ಠಾರ್ಥ ಸಿದ್ಧಿಸುವ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದ್ದು ಕ್ಷೇತ್ರದಲ್ಲಿ ಮಹಮ್ಮಾಯಿಯೊಂದಿಗೆ ಶ್ರೀ ಗಣಪತಿ, ಶ್ರೀ ಗುರು, ಶ್ರೀ ನಾಗಬ್ರಹ್ಮ, ಶ್ರೀ ರಕ್ತೇಶ್ವರೀ, ಗುಳಿಗ, ಕಾಳಬೈರವ, ಪಂಜುರ್ಲಿ, ಕೊರಗಜ್ಜ ಮೊದಲಾದ ದೈವದೇವರ ಸಾನಿಧ್ಯವಿದೆ.
ಇದೀಗ ಎಲ್ಲಾ ದೈವದೇವರಿಗೆ ನೂತನ ಸಾನಿಧ್ಯಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ ಹಾಗೂ ಭಕ್ತಜನತೆ ಕಾರ್ಯಪ್ರವೃತ್ತವಾಗಿದ್ದು ಬಾಲಾಲಯ ಪ್ರತಿಷ್ಠೆ ಸಹಸ್ರಾರು ಭಕ್ತಾದಿಗಳು, ಗಣ್ಯರ ಸಮಕ್ಷಮದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈಗಾಗಲೇ ಶ್ರಮದಾನ ಸೇವೆಗಳು ಆರಂಭಗೊಂಡಿದ್ದು ಕ್ಷೇತ್ರದ ಪುನರ್ ನಿರ್ಮಾಣ ವಿದ್ಯುಕ್ತವಾಗಿ ಆರಂಭಗೊಳಿಸುವ ನಿಟ್ಟಿನಲ್ಲಿ ಶಿಲಾನ್ಯಾಸ ಸಮಾರಂಭವನ್ನು ಆಯೋಜಿಸಲಾಗಿದೆ.
