ಬಂಟ್ವಾಳ :ದೇಶದಲ್ಲಿ ಗ್ರಾಮೀಣ ಪ್ರದೇಶ ಸಹಿತ ನಗರವಾಸಿಗಳಿಗೆ ವಿವಿಧ ಸರ್ಕಾರಿ ಸೌಲಭ್ಯ ನೀಡುವುದರ ಜೊತೆಗೆ ಅವರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾವಲಂಬನೆ ಮೂಡಿಸಲು ಸ್ವ ಉದ್ಯೋಗಕ್ಕೆ ಪ್ರೇರಣೆ ನೀಡುವುದರ ಮೂಲಕ ಒಟ್ಟು ಜೀವನ ಮಟ್ಟ ಸುಧಾರಿಸಲು ಇದೇ 1ರಿಂದ 15ರತನಕ ಶಹರಿ ಸಮೃದ್ಧಿ ಉತ್ಸವ ನಡೆಯುತ್ತಿದೆ ಎಂದು ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಇದರ ಹಿರಿಯ ವ್ಯವಸ್ಥಾಪಕಿ ಐರಿನ್ ಹೇಳಿದ್ದಾರೆ.
ಬಂಟ್ವಾಳ ಪುರಸಭೆ ಸಹಕಾರಿ ಸಂಘದ ವತಿಯಿಂದ ‘ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ’ ಪ್ರಯುಕ್ತ ಮಂಗಳವಾರ ಬಿ.ಸಿ.ರೋಡಿನಲ್ಲಿ ಏರ್ಪಡಿಸಿದ್ದ ‘ಶಹರಿ ಸಮೃದ್ಧಿ ಉತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪುರಸಭೆ ಸಹಕಾರಿ ಸಂಘದ ಅಧ್ಯಕ್ಷೆ ವಸಂತಿ ಗಂಗಾಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಯಷ್ಮಾನ್ ಭಾರತ ಜಿಲ್ಲಾ ಸಂಯೋಜಕ ಜಗನ್ನಾಥ್ ಶಿರ್ಲಾಲು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿದ ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆ ಸದುಪಯೋಗಪಡಿಸಲು ಸಲಹೆ ನೀಡಿದರು.
ಮುದ್ರಾ ಯೋಜನೆ ಸಹಿತ ಪಿಂಚಣಿ ಉಳಿತಾಯ ಮತ್ತು ಜೀವವಿಮೆ ಯೋಜನೆಗಳ ಬಗ್ಗೆ ಎಚ್ಡಿಎಫ್ಸಿ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಹೃಷಿಕೇಶ್ ಕುಂಬ್ಳೆ ಮಾಹಿತಿ ನೀಡಿದರು. ಉಜ್ವಲ ಯೋಜನೆ ಸಂಪನ್ಮೂಲ ವ್ಯಕ್ತಿ ಗಣೇಶ ಪ್ರಸಾದ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ‘ಉಜ್ವಲ’ ಯೋಜನೆಯಲ್ಲಿ ಜನತೆಗೆ ಸಮಯ ಉಳಿತಾಯ ಜೊತೆಗೆ ಉಸಿರಾಟ ತೊಂದರೆ ಮತ್ತಿತರ ಅನಾರೋಗ್ಯ ದೂರ ಮಾಡಿ ಆರೋಗ್ಯ ಬಗ್ಗೆ ಕಾಳಜಿ ತೋರಲಾಗಿದೆ ಎಂದರು.
ಎಂಜಿನಿಯರ್ ಗಿರೀಶ್ ಪ್ರಧಾನ ಮಂತ್ರಿ ಆವಾಜ್ ಯೋಜನೆ ಮತ್ತಿತರ ವಸತಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಭಾರತಿ ಮಾತನಾಡಿ, ಮಾತೃವಂದನಾ ಸಹಿತ ಸುಕನ್ಯಾ ಸಮೃದ್ಧಿ ಮತ್ತಿತರ ಸೌಲಭ್ಯ ಪಡೆಯುವ ಮೂಲಕ ಮಹಿಳೆಯರು ಆರೋಗ್ಯ ಮತ್ತು ಜೀವನ ಮಟ್ಟ ಸುಧಾರಿಸಿಕೊಳ್ಳಬೇಕು ಎಂದರು. ಇದೇ ವೇಳೆ ಪೌರ ಕಾರ್ಮಿಕರಿಗೆ ಗುರುತಿನ ಚೀಟಿ, ಸುರಕ್ಷಾ ಪರಿಕರ ವಿತರಣೆ ಸಹಿತ ಬೀದಿ ಬದಿ ವ್ಯಾಪಾರಸ್ತರು ಮತ್ತಿತರ ಅರ್ಹ ಫಲಾನುಭವಿಗಳಿಗೆ ವಿವಿಧ ಚೆಕ್ ವಿತರಿಸಿಸಲಾಯಿತು.
ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಜಯಲಕ್ಷ್ಮಿ ವಂದಿಸಿದರು. ಸಮುದಾಯ ಸಂಘಟಕಿ ಉಮಾವತಿ ಕಾರ್ಯಕ್ರಮ ನಿರೂಪಿಸಿದರು.
