ಬಂಟ್ವಾಳ: ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ,ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಆಶ್ರಯದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳ ರಾಜ್ಯಮಟ್ಟದ “ವಿಶ್ವವ್ಯಾಪಿ ಭಾರತ” ವಿಚಾರ ಸಂಕಿರಣವು ಫೆ.5 ರಂದು ವಿದ್ಯಾಕೇಂದ್ರದ ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಲಿದೆ ಎಂದು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದ್ದಾರೆ.
ಗುರುವಾರ ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಎಂಟನೆ ವರ್ಷದ ಈ ವಿಚಾರ ಸಂಕಿರಣವನ್ನು ಖ್ಯಾತ ಚಿಂತಕರು,ವಿದ್ವಾಂಸರಾದ ಶತಾವಧಾನಿ ಆರ್ .ಗಣೇಶ್ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು. ವಿಷಯವನ್ನು ಎರಡು ಪ್ರಮುಖ ಘಟ್ಟವನ್ನಾಗಿ ವಿಭಾಗಿಸಲಾಗಿದ್ದು,ಮೊದಲ ಅವಧಿಯಲ್ಲಿ ‘ ಭಾರತಿಯ ಸಂಸ್ಕೃತಿಯ ವಿಶ್ವಸಂಚಾರ’ ಕುರಿತು ನವದೆಹಲಿ ಭಾರತೀಯ ಇತಿಹಾಸ ಸಂಕಲನ ಯೋಜನೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಶರದ್ ಹೆಬ್ಬಾಳ್ಕರ್ ಅವರು ವಿಚಾರ ಮಂಡಿಸಲಿದ್ದಾರೆ.
ಬಳಿಕ ‘ ಭಾರತ ವಿಶ್ವಮಾನ್ಯವಾಗುವತ್ತ’ ಎಂಬ ವಿಷಯದ ಬಗ್ಗೆ ಗುಂಪು ಸಂವಾದ ನಡೆಯಲಿದ್ದು,ಶತಾವಧಾನಿ ಡಾ.ಆರ್.ಗಣೇಶ್,ಡಾ.ಶರದ್ ಹೆಬ್ಬಾಳ್ಕರ್,ಡಾ.ಪ್ರಭಾಕರ ಭಟ್,ಕ್ಯಾ.ಗಣೇಶ್ ಕಾರ್ಣಿಕ್ ಸಂವಾದದಲ್ಲಿ ಭಾಗವಹಿಸುವರು,ನಂತರ ಮುಕ್ತ ಚಿಂತನ-ಪ್ರಶ್ನೋತ್ತರ ನಡೆಯಲಿದೆ ಎಂದು ತಿಳಿಸಿದರು. ಸಂಜೆ ಶಾಲಾ ಸಂಚಾಲಕ ವಸಂತಮಾಧವ ಅವರ ಆಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಜ್ಙಾಪ್ರವಾಹ ದಕ್ಷಿಣ ಮಧ್ಯಕ್ಷೇತ್ರೀಯ ಸಂಯೋಜಕ ರಘನಂದನ್ ಸಮಾಪನ ನುಡಿ ಮಾಡಲಿದ್ದಾರೆಎಂದರು.
ನಮ್ಮ ದೇಶ,ಸಂಸ್ಕೃತಿ ,ಪರಂಪರೆಯವಿಚಾರಗಳಿಗೆ ಅದ್ಯತೆ ನೀಡಿ ಕಳೆದ ಎಂಟು ವರ್ಷಗಳಿಂದ ವಿಚಾರ ಸಂಕಿಎಣ ನಡೆಸಲಾಗುತ್ತಿದೆಎಂದ ಅವರು,ಮಂಗಳೂರು ವಿಶ್ವವಿದ್ಯಾನಿಲಯಗಳ 62 ಕ್ಕೂ ಹೆಚ್ಚು ಕಾಲೇಜುಗಳ ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಪ್ರತಿನಿಧಿಗಳು ಸೇರಿದಂತೆ 1650 ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಜಗತ್ತಿನ ಮೂಲೆ,ಮೂಲೆಗಳಿಗೆ ಹೋದ ನಮ್ಮ ಹಿರಿಯರು,ಈ ಭೂಮಿಯ ಭವ್ಯ ಸಂಸ್ಕೃತಿಯ ಪ್ರಸಾರಕರು,” ಕೃಣ್ವಂತೋ ವಿಶ್ವಮಾರ್ಯಾಂ” ಕರೆಗೆ ಓಗೊಟ್ಟ ಇವರು ವಿಶ್ವದ ಅನ್ಯಾನ್ಯ ಜನಾಂಗಗಳಿಗೆ ಉಚ್ಚ ವಿಚಾರ ಪ್ರಣಾಳಿಕೆಯನ್ನು ಜೀವನದ ಉನ್ನತ ದೃಷ್ಟಿಯನ್ನು ಕೊಟ್ಟು ಮಾರ್ಗದರ್ಶನ ಮಾಡಿದವರು.
ಭಾರತದ ಈ ವಿಶ್ವಸಂಚಾರದ ಕುರಿತು ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಈ ವಿಚಾರ ಸಂಕಿರಣ ಆಯೋಜಿಸಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಶಾಲಾ ಸಂಚಾಲಕ ವಸಂತಮಾಧವ,ಸಹ ಸಂಚಾಲಕ ರಮೇಶ್ ಎನ್.,ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯರ್ ಕಟ್ಟೆ ರವರು ಉಪಸ್ಥಿತರಿದ್ದರು.
