ಮಂಗಳೂರು: ಹಿರಿಯ ತುಳು ಸಾಹಿತಿ ಮತ್ತು ಜಾನಪದ ಕಲಾವಿದರಾದ ಉಗ್ಗಪ್ಪ ಪೂಜಾರಿ ಪುಚ್ಚೇರಿ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿಯ ಸಿರಿಚಾವಡಿಯಲ್ಲಿ ಬುಧವಾರ ” ಚಾವಡಿ ತಮ್ಮನ ” ನೀಡಿ ಗೌರವಿಸಲಾಯಿತು.
ಸಮುದಾಯ ಕರ್ನಾಟಕದ ಉಪಾಧ್ಯಕ್ಷ ವಾಸುದೇವ ಉಚ್ಚಿಲ್ ಸನ್ಮಾನಿಸಿ ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ಅನಗತ್ಯವಾಗಿ ವೈಭವೀಕರಿಸದೆ ಉಗ್ಗಪ್ಪ ಪೂಜಾರಿ ತಮ್ಮ ಕೃತಿಗಳ ಮೂಲಕ ನೈಜವಾಗಿ ಕಟ್ಟಿಕೊಟ್ಟಿರುವುದು ಅವರ ಹೆಚ್ಚುಗಾರಿಗೆ ಎಂದರು.
ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ತುಳು ಸಾಹಿತ್ಯ, ಸಂಸ್ಕ್ರತಿ, ಜಾನಪದ ಕಲೆ ಇತ್ಯಾದಿ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈಯುತ್ತಿರುವ ತುಳುವ ಸಾಧಕರನ್ನು ಚಾವಡಿ ತಮ್ಮನ ಎಂಬ ಕಾರ್ಯಕ್ರಮದ ಮೂಲಕ ಗುರುತಿಸಿ ಗೌರವಿಸಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಕಾಶಕ ಕಲ್ಲೂರು ನಾಗೇಶ ಅಭಿನಂದನಾ ಭಾಷಣ ಮಾಡಿ ಉಗ್ಗಪ್ಪ ಪೂಜಾರಿಯವರ ಬದುಕು, ಸಾಧನೆ, ಸಾಹಸ, ಶ್ರಮ ನಿಜಕ್ಕೂ ಮಾದರಿಯಾದುದು ಎಂದರು.
ಸದಸ್ಯ ಸಂಚಾಲಕ ಗೋಪಾಲ ಅಂಚನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಸ್ಯ ತಾರನಾಥ ಗಟ್ಟಿ ವಂದಿಸಿದರು. ಸದಸ್ಯ ಬೆನೆಟ್ ಅಮ್ಮಣ್ಣ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ಡಾ.ವಾಸುದೇವ ಬೆಳ್ಳೆ, ಡಾ.ವೈ.ಎನ್.ಶೆಟ್ಟಿ, ಶಿವಾನಂದ ಕರ್ಕೆರ ಉಪಸ್ಥಿತರಿದ್ದರು.
