ಬಂಟ್ವಾಳ: ಕೇವಲ ಇಂಗ್ಲೀಷ್ ಕಲಿಸಲು ಈ ಸರ್ಕಾರಿ ಶಾಲೆಯನ್ನು ಕಟ್ಟಿದ್ದಲ್ಲ, ಬದಲಾಗಿ ಕನ್ನಡ ಉಳಿಸಲು ಈ ಶಾಲೆಯನ್ನು ಕಟ್ಟಲಾಗಿದೆ ಎಂದು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಾಣ ಆಳ್ವ ಹೇಳಿದ್ದಾರೆ. ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಇದರ ದತ್ತು ಯೋಜನೆಯಡಿ ನಿರ್ಮಾಣಗೊಂಡ ದಡ್ಡಲಕಾಡು ಸರಕಾರಿ ಶಾಲೆ ಲೋಕಾರ್ಪಣೆಯ ಅಂಗವಾಗಿ ಶನಿವಾರ ಸಂಜೆ ನಡೆದ ಮಾತೃಭಾಷೆಯೊಂದಿಗೆ ಆಂಗ್ಲ ಶಿಕ್ಷಣದ ಮಹತ್ವ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಖಾಸಗಿ ಶಾಲೆಗಳ ಮೂಲಕ ಗೌರವಾದಿಂದ ದುಡ್ಡು ಮಾಡುವ ದಂಧೆ ಆರಂಭಗೊಂಡಿದೆ, ಆಡಳಿತ ನಡೆಸುವವರಲ್ಲಿಯೇ ಆಂಗ್ಲ ಮಾದ್ಯಮ ಶಾಲೆಗಳಿವೆ ಎಂದು ಆರೋಪಿಸಿದ ಅವರು ಮನೆಯಲ್ಲಿ ತುಳು ಮಾತನಾಡಿ, ಶಾಲೆಯಲ್ಲಿ ಕನ್ನಡ ಮಾತನಾಡಿ, ಇಂಗ್ಲೀಷ್ನಲ್ಲಿ ಪ್ರಭುದ್ದತೆಯನ್ನು ಪಡೆಯಿರಿ ಎಂದು ತಿಳಿಸಿದರು.
ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ವಿಶೇಷ ಉಪನ್ಯಾಸ ನೀಡಿ ಶಾಲೆ ಸಂಸ್ಕಾರದ ಕೇಂದ್ರ. ಶಿಕ್ಷಣ ಎಂದರೆ ಕೇವಲ ಬರವಣಿಗೆಯಷ್ಟೇ ಅಲ್ಲ ಅದು ಸಂಸ್ಕಾರ ಕೊಡುವಂತಿರಬೇಕು, ನಾವು ಹೇಗೆ ಜೀವಿಸಬೇಕು ಎನ್ನುವುದೇ ದೊಡ್ಡ ಶಿಕ್ಷಣವಾಗಬೇಕು. ಸಂಸ್ಕಾರಯುತ ಶಿಕ್ಷಣ ಕೊಟ್ಟು ಮಕ್ಕಳನ್ನು ಬೆಳೆಸುವ ಕಾರ್ಯ ಆಗಬೇಕು ಎಂದರು. ಪ್ರಕಾಶ್ ಅಂಚನ್ ಅವರು ಮಾದರಿ ಸರಕಾರಿ ಶಾಲೆಯನ್ನು ನಿರ್ಮಿಸಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ತನ್ನ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಮಾದರಿಯಾದವರು, ನಮಗೆ ಆಂಗ್ಲರ ಸಂಸ್ಕøತಿ ಬೇಡ, ಆಂಗ್ಲ ಕಲಿಕೆ ಇರಲಿ ಎಂದು ಅಭಿಪ್ರಾಯ ಪಟ್ಟರು.
ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಪ್ರಾಸ್ತವಿಕವಾಗಿ ಮಾತನಾಡಿ ಕನ್ನಡ ಭಾಷೆಯೊಂದಿಗೆ ಆಂಗ್ಲ ಭಾಷೆಯ ಕಲಿಕೆಯೂ ಇರಲಿ ಎನ್ನುವುದು ನಮ್ಮ ಆಶಯ ಎಂದರು. ಪುರುಷೋತ್ತಮ ಅಂಚನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಹೀಗಾದರೆ ಹೇಗೆ ನಾಟಕ ಹಾಗೂ ಮಜಾಭಾರತ ಕಲಾವಿದರಿಂದ ಕಾಮಿಡಿ ಹಂಟ್ಸ್ ಕಾರ್ಯಕ್ರಮ ನಡೆಯಿತು.
ಚಿತ್ರ: ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿದರು.
